ಫೇಲಾಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಸ್ಟಿಂಕ್ಷನ್


ಬೆಂಗಳೂರು, [ಏ.30]:ಎಸ್ ಎಸ್ ಎಲ್ ಸಿ ಫಲಿತಾಂಶ ಬರುವ ಮುನ್ನವೇ ಅನುತ್ತೀರ್ಣನಾಗುವೆನೆಂಬ ಭೀತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಂಗವಾರ ಗ್ರಾಮದ ನಂದನ್​ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಂದನ್​ ಗಂಗವಾರದ ಸನ್​ರೈಸ್​ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.ನಿನ್ನೆ [ಮಂಗಳವಾರ] ಪ್ರಕಟಗೊಂಡ ಎಸ್​ಎಸ್​ಎಲ್​ಸಿ ರಿಸಲ್ಟ್ ನಲ್ಲಿ ನಂದನ್ 625ಕ್ಕೆ 530 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.ಆದ್ರೆ, ತನ್ನ ದುಡುಕಿನ ನಿರ್ಧಾರದಿಂದ ಈ ವಿಚಾರ ತಿಳಿಯಲು ಈತನೇ ಇಲ್ಲವಾಗಿದ್ದಾನೆ.ದುಡುಕಿನ ನಿರ್ಧಾರ ಕೈಗೊಳ್ಳುವ ಮುನ್ನವೇ ಒಮ್ಮೆ ಯೋಚಿಸುವುದು ಒಳಿತು.ಇಂತಹ ಪರೀಕ್ಷೆಗಳು ಒಂದಲ್ಲ ಐದಾರೂ ಬಾರಿ ಬರೆಯಬಹುದು. ಆದ್ರೆ ಒಮ್ಮೆ ಹೋದ ಜೀವ ಮತ್ತೆ ಬರಲ್ಲ ಎನ್ನುವುದನ್ನು ವಿದ್ಯಾರ್ಥಿಗಳು ಆತ್ಮವಲೋಕನ ಮಾಡಿಕೊಳ್ಳಬೇಕು.

ಪಾಕ್ ಪ್ರಧಾನಿ ಟ್ವಿಟರ್ ಫಾಲೋ ಮಾಡಿದ ಕಾಶ್ಮೀರ ರಾಜ್ಯಪಾಲರ ಖಾತೆ ಹ್ಯಾಕ್


ಶ್ರೀನಗರ (ಮೇ. 01):ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಮಂಗಳವಾರ ಭಾರೀ ವಿವಾದಕ್ಕೆ ಕಾರಣವಾಯ್ತು.
ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು, ವೈರಿ ದೇಶದ ಪ್ರಧಾನಿ ಟ್ವೀಟರ್‌ ಖಾತೆ ಫಾಲೋ ಮಾಡಿದ್ದು ಆರಂಭದಲ್ಲಿ ಇದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಬಳಿಕ ಮಲಿಕ್‌ರ ಟ್ವೀಟರ್‌ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್‌ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ. ಘಟನೆ ಕುರಿತು ರಾಜ್ಯಪಾಲರ ಕಚೇರಿ, ಪೊಲೀಸರಿಗೆ ದೂರು ಸಲ್ಲಿಸಿದೆ.

ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ: ಸಹರಾ ಎಫ್.ಸಿ ಹೊಳಮಾಲ ಸೆಮಿಫೈನಲ್ಗೆ


ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ: ಸಹರಾ ಎಫ್.ಸಿ ಹೊಳಮಾಲ ಸೆಮಿಫೈನಲ್ಗೆ
ಚೆಟ್ಟಳ್ಳಿ: ಸಮೀಪದ ಕೊಂಡಂಗೇರಿ ಯೂತ್ ಕ್ಲಬ್ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದಲ್ಲಿ ಹಾಕತ್ತೂರು ಎಫ್.ಸಿ ತಂಡವನ್ನು  ೩-೧ ಗೋಲುಗಳ ಅಂತರದಿಂದ ಮಣಿಸಿ ಕ್ರೀಡಾಕೂಟದ ಮೊದಲ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದಾರೆ.

ಚೆಲ್ಸಿ ಗೋಣಿಕೊಪ್ಪ ಹಾಗೂ ಅಲ್ ಅಮೀನ್ ಹಳೇ ತಾಲ್ಲೂಕು ನಡುವಿನ ಪಂದ್ಯಾಟದಲ್ಲಿ ಗೋಣಿಕೊಪ್ಪ ತಂಡವು ೧-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಯೂತ್ ಫಾರ್ ಜಸ್ಟೀಸ್ ಸುಂಟಿಕೊಪ್ಪ ಹಾಗೂ ಚಾಮಿಯಾಲ್ ತಂಡಗಳ ನಡುವಿನ ಪಂದ್ಯಾಟವು ಡ್ರಾ ಆದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು‌‌.

ಪೆನಾಲ್ಟಿ ಶೂಟೌಟ್ ನಲ್ಲಿ ಚಾಮಿಯಾಲ್ ತಂಡವು ೩-೨ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಪ್ರವೇಶಿಸಿತು‌.
ಯಂಗ್ ಇಂಡಿಯಾ ಪಾಲಿಪೆಟ್ಟ ಹಾಗೂ ಕಡಂಗ ತಂಡಗಳ  ಪಂದ್ಯಾಟದಲ್ಲಿ ಯಂಗ್ ಇಂಡಿಯಾ ತಂಡವು ೩-೧ ಗೋಲುಗಳ ಅಂತರದಿಂದ ಗೆದ್ದಿತು.
ಕಲ್ಲುಬಾಣೆ ಹಾಗೂ ಯುನೈಟೆಡ್ ಕುಂಜಿಲ ನಡುವಿನ ಪಂದ್ಯಾಟವು ೧-೧ ಗೋಲುಗಳ  ಸಮಬಲ ಸಾಧಿಸದ  ಕಾರಣ ಪೆನಾಲ್ಟಿ ಶೂಟೌಟ್ ನಲ್ಲಿ ಕುಂಜಿ ತಂಡವು ೨-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.



ಚಿಟ್ಟಡೆ ಎಫ್.ಸಿ ಹಾಗೂ ಎಲಿಯಂಗಾಡು ಫ್ರೆಂಡ್ಸ್ ನಡುವಿನ ಪಂದ್ಯದಲ್ಲಿ ಚಿಟ್ಟಡೆ ತಂಡವು ೪-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.
ಟೀಂ ಕೂಲ್ ಸಿದ್ದಾಪುರ ಹಾಗೂ ಚೆಲ್ಸಿ ಗೋಣಿಕೊಪ್ಪ ತಂಡವು ೨-೧ ಗೋಲುಗಳ ಅಂತರದಿಂದ ಗೆದ್ದಿತು.
ಚಿಟ್ಟಡೆ ಎಫ್.ಸಿ ಹಾಗೂ ಪಡಿಯಾನಿ ಎಫ್.ಸಿ.ನಡುವಿನ  ಪಂದ್ಯಾಟದಲ್ಲಿ ಪಡಿಯಾನಿ ತಂಡವು ೨-೦ ಗೋಲುಗಳ ಅಂತರದಿಂದ ಗೆದ್ದಿತು.
*ಕೆ.ಎಂ ಇಸ್ಮಾಯಿಲ್ ಕಂಡಕರೆ*

*ಇಂದಿನ ಪಂದ್ಯಾಟ*

ಚೆಲ್ಸಿ ಗೋಣಿಕೊಪ್ಪ: ಯುನೈಟೆಡ್ ಕುಂಜಿಲ

ಚಾಮಿಯಾಲ್ :ಸಿ.ಟಿ ರೈಡರ್ಸ್ ಕುಂಜಿಲ

ಆರ್.ವೈ.ಸಿ ಎಮ್ಮೆಮಾಡು:ಕಿಪ್ಸ್ಟಾ ಮೂರ್ನಾಡು

 ಫ್ಯಾನ್ಸಿ ಕಂಡಕರೆ: ಫೋರ್ ಸ್ಟಾರ್ ಎಡಪಲಾ

ಗರಂಗಂದೂರು:ಎಚ್.ಕೆ.ಜಿ.ಎನ್ ಸುಂಟಿಕೊಪ್ಪ

ಕೆ.ವೈ.ಸಿ ಕೊಂಡಂಗೇರಿ:ಬ್ಲ್ಯಾಕ್ ಬಾಯ್ಸ್

ವಿರಾಜಪೇಟೆ ಫ್ರೆಂಡ್ಸ್: ಕೆ.ಎಂ. ಸಿ ಕಲ್ಲಮೊಟ್ಟೆ.

ರೋಜಾರಿಯನ್ಸ್ ಗೋಣಿಕೊಪ್ಪ: ಚೆಟ್ಟಳ್ಳಿ ಫ್ರೆಂಡ್ಸ್

ತಾಯಿ ಮಗಳ ಭೀಕರ ಹತ್ಯೆ : ಸೋಮವಾರಪೇಟೆ ಸಮೀಪ ಘಟನೆ

ತಾಯಿ ಮಗಳ ಭೀಕರ ಹತ್ಯೆ 
 ಸೋಮವಾರಪೇಟೆ : ಕಾಫಿ ತೋಟದಲ್ಲಿ ತಾಯಿ ಮಗಳನ್ನ ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿರೋ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದಲ್ಲಿ ನಡೆದಿದೆ. ಕವಿತಾ(45), ಜಗಶ್ರೀ(16) ಹತ್ಯೆಯಾದವರು. ಕಾಫಿತೋಟವೊಂದರ ಮನೆಯಲ್ಲಿದ್ದ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ

 ಮುಗಿಸಿರುವ ಜಗಶ್ರೀ ರಜೆಗೆಂದು ಇತ್ತೀಚೆಗಷ್ಟೇ ಊರಿಗೆ ಬಂದಿದ್ರು. ಆಸ್ತಿ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದ್ದು, ಸೋಮವಾರಪೇಟೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ಧಾಪುರದಲ್ಲೂ ಡಬ್ಬಲ್ ಮರ್ಡರ್ . ಸಾಮಾನ್ಯವಾಗಿ ಕೊಡಗಿನಲ್ಲಿ ಆಸ್ತಿಗಾಗಿ ವಿಚಾರದಲ್ಲಿ ಶುರುವಾಗೋ ಜಗಳ ಅಷ್ಟಕ್ಕೇ ಮುಗಿಯದೇ ಕೊಲೆಯಲ್ಲಿ ಅಂತ್ಯವಾಗುವ ಪ್ರಕರಣಗಳು ನಡೆಯುತ್ತಲೇ ಇರೋದು ನಿಜಕ್ಕೂ ದುರಂತ.

ಎಸ್.ಎಸ್.ಎಲ್.ಸಿ. ಫಲಿತಾಂಶ ಕೊಡಗು ೨೨ ನೇ ಸ್ಥಾನಕ್ಕೆ ಕುಸಿತ


ಹತ್ತನೇ ತರಗತಿ ಫಲಿತಾಂಶ : ಕೊಡಗು 22 ನೇ ಸ್ಥಾನಕ್ಕೆ ಕುಸಿತ : ಜಾಗೃತಿ, ಶಾವಣಿ ಜಿಲ್ಲೆಗೆ ಪ್ರಥಮರು
ಮಡಿಕೇರಿ ಏ.೩೦ : ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷ ೧೮ ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿ ೨೨ ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಗೋಣಿಕೊಪ್ಪಲು ಕಳತ್ಮಾಡ್ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಗೃತಿ ಸುಬ್ಬಯ್ಯ ಹಾಗೂ ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಾಲೆಯ ಶ್ರಾವಣಿ ೬೧೬ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಾರಿ ಶೇ. ೭೮.೮೧ ಫಲಿತಾಂಶ ಗಳಿಸಿರುವ ಕೊಡಗು ಜಿಲ್ಲೆ ೨೦೧೮ರಲ್ಲಿ ಶೇ. ೮೦.೬೮ ರಷ್ಟು ಸಾಧನೆ ಮಾಡಿತ್ತು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂದರ್ಭ ನೀಡಿದ ರಜೆಗಳಿಂದಾಗಿ ಫಲಿತಾಂಶದಲ್ಲಿ ಹಿನ್ನಡೆಯಾಗಿರಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಚ್ಚಾಡೊ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೨೦ ಶಾಲೆಗಳು ಶೇಕಡ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಈ ಪೈಕಿ ೭ ಸರಕಾರಿ ಶಾಲೆಗಳು, ೩ ಅನುದಾನಿತ ಹಾಗೂ ೧೦ ಅನುದಾನ ರಹಿತ ಶಾಲೆಗಳು ಸೇರಿವೆ. ಕನ್ನಡ ಮಾದ್ಯಮದಲ್ಲಿ ಶೇಕಡ ೬೯.೨೬ ಹಾಗೂ ಆಂಗ್ಲ ಮಾದ್ಯಮದಲ್ಲಿ ಶೇ.೮೯.೦೫ ಫಲಿತಾಂಶ ದಾಖಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಶೇ. ೮೪.೬೪, ಮಡಿಕೇರಿ ೭೩.೫೮ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೬೮.೧೨ರಷ್ಟು ಫಲಿತಾಂಶ ಕಂಡು ಬಂದಿದೆ.
::: ಶೇ.೧೦೦ರಷ್ಟು ಫಲಿತಾಂಶ ಪಡೆದ ಶಾಲೆಗಳು :::
ಸರ್ಕಾರಿ ಶಾಲೆಗಳಾದ ಕೊಂಡಗೇರಿ, ಚೆಂಬು, ಹಂಡ್ಲಿ, ನಿಡ್ತ, ಮಕ್ಕಂದೂರು, ಟಿ.ಶೆಟ್ಟಿಗೇರಿ, ಕಿರಗಂದೂರು ಒಟ್ಟು ೭ ಶಾಲೆಗಳು. ಅನುದಾನಿತ ಶಾಲೆಗಳಾದ ಬಿರುನಾಣಿ ಮರೆನಾಡು ಪ್ರೌಢ ಶಾಲೆ, ಬೆಕ್ಕೆ ಸೊಡ್ಲೂರು ಶಾರದ ಪ್ರೌಢ ಶಾಲೆ, ದೇವಣಗೆರೆ ಬಿ.ಸಿ.ಪ್ರೌಢ ಶಾಲೆ, ಅನುದಾನ ರಹಿತ ಶಾಲೆಗಳಾದ ಪೊನ್ನಂಪೇಟೆಯ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಕೊಡಗರಹಳ್ಳಿಯ ಶಾಂತಿ ನಿಕೇತನ ಪ್ರೌಢ ಶಾಲೆ, ಮೂರ್ನಾಡು ಮಾರುತಿ ಪ್ರೌಢ ಶಾಲೆ, ವಿರಾಜಪೇಟೆಯ ಕಾವೇರಿ ಪ್ರೌಢ ಶಾಲೆ, ಗೋಣಿಕೊಪ್ಪದ ಸಂತ ತೋಮಸ್ ಪ್ರೌಢ ಶಾಲೆ, ವಿರಾಜಪೇಟೆಯ ತ್ರಿವೇಣಿ ಪ್ರೌಢ ಶಾಲೆ, ಶ್ರೀಮಂಗಳದ ಜೆ.ಸಿ. ಆಂಗ್ಲ ಮಾಧ್ಯಮ ಶಾಲೆ, ಕೊಡಂಬೂರು ಜ್ಞಾನ ಜ್ಯೋತಿ ಪ್ರೌಢ ಶಾಲೆ, ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ ಹಾಗೂ ವಿರಾಜಪೇಟೆಯ ಮೌಂಟೇನ್ ವ್ಯೂ ಪ್ರೌಢ ಶಾಲೆ ಒಟ್ಟು ೧೦ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೨೦ ಶಾಲೆಗಳಿಗೆ ಶೇ.೧೦೦ ರಷ್ಟು ಫಲಿತಾಂಶ ಪಡೆದಿವೆ.
::: ಪ್ರಥಮ ನಾಲ್ಕು ಸ್ಥಾನ ಗಳಿಸಿದ ವಿದ್ಯಾರ್ಥಿಗಳು :::
ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಎಂ.ಜಾಗೃತಿ ಸುಬ್ಬಯ್ಯ ೬೧೬, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಎಂ.ಯು.ಶ್ರಾವಣಿ ೬೧೬, ಶನಿವಾರಸಂತೆಯ ಸೇಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ಎ.ಎಚ್.ಕವನ ೬೧೫, ಬಿ.ಅಪೇಕ್ಷಾ ೬೧೨, ಚೌಡ್ಲು ಸಾಂಧೀಪನಿ ಪ್ರೌಢ ಶಾಲೆಯ ಎಚ್.ಕೆ.ಚಿನ್ಮಯಿ ೬೧೨, ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಎ.ಅನನ್ಯ ೬೧೨, ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ಡಿ.ಆರ್.ಶಿವಾನಿ ಮತ್ತು ಎನ್.ಡಿ.ಹರ್ಷಿಣಿ ೬೧೨, ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಪಿ.ಎಲ್.ಮೌನ ಮತ್ತು ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಪಿ.ಅನನ್ಯ ಅಕ್ಕಮ್ಮ ಅವರು ತಲಾ ೬೧೧ ಅಂಕ ಪಡೆದಿದ್ದಾರೆ.
ಒಟ್ಟಾರೆ ತಾಲ್ಲೂಕುವಾರು ಗಮನಿಸಿದಾಗ ವಿರಾಜಪೇಟೆ ತಾಲ್ಲೂಕು ಶೇ.೮೪.೬೪, ಮಡಿಕೇರಿ ತಾಲ್ಲೂಕು ಶೇ.೭೩.೮೫ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.೬೮.೧೮ ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಫಲಿತಾಂಶ ಶೇ ೭೨.೫೪, ಅನುದಾನಿತ ಶಾಲೆಗಳ ಫಲಿತಾಂಶ ಶೇ ೭೪.೨೮, ಅನುದಾನ ರಹಿತ ಶಾಲೆಗಳ ಫಲಿತಾಂಶ ಶೇ ೮೭.೬೪ ಆಗಿದೆ. ಜಿಲ್ಲೆಯಲ್ಲಿ ೪೭ ಸರ್ಕಾರಿ ಪ್ರೌಢಶಾಲೆಗಳಿದ್ದು, ೪೮ ಅನುದಾನಿತ ಶಾಲೆಗಳಿದ್ದರೆ, ಅನುದಾನ ರಹಿತ ಶಾಲೆಗಳ ಸಂಖ್ಯೆ ೬೭ ಆಗಿದೆ. ೬,೪೪೪ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ ೫,೦೮೭ ಮಂದಿ ತೇರ್ಗಡೆ ಹೊಂದಿದ್ದಾರೆ.

ಎಸ್ಸೆಸ್ಸಲ್ಸಿ ಫಲಿತಾಂಶ: ರಾಜ್ಯ ಪ್ರಥಮ ಯಾರು..?


ಬೆಂಗಳೂರು: ವಾಡಿಕೆ ಎನ್ನುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬೆಂಗಳೂರು ದಕ್ಷಿಣದ ಡಿ. ಸೃಜನಾ ಮತ್ತು ಉತ್ತರ ಕನ್ನಡ ಜಿಲ್ಲೆಯ ನಾಗಾಂಜಲಿ ಪರಮೇಶ್ವರ್‌ ನಾಯ್ಕ್‌ಗೆ ಗರಿಷ್ಠ ಅಂಕ ಲಭ್ಯವಾಗಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.625 ಅಂಕಕ್ಕೆ 625 ಅಂಕ ಪಡೆದಿರುವ ಈ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೆ, ಒಟ್ಟು 11 ವಿದ್ಯಾರ್ಥಿಗಳಿಗೆ



624 ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.ಬೆಂಗಳೂರು ದಕ್ಷಿಣದ ಆನೇಕಲ್​ ತಾಲೂಕು ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಇಂಗ್ಲಿಷ್ ಹೈ ಸ್ಕೂಲ್‌ನ ವಿದ್ಯಾರ್ಥಿನಿ ಡಿ. ಸೃಜನಾ 625 ಅಂಕ, ಕುಮುಟಾದ ಕೊಲಬಾ ವಿಥೋಬ್‌ ಶಾನ್‌ಭೋಗ್‌ ಕಲ್ಬಾಕರ್‌ ಹೈ ಸ್ಕೂಲ್‌ನ ನಾಗಾಂಜಲಿಗೆ 625 ಅಂಕ ಬಂದಿವೆ.
ಬೆಂಗಳೂರು ಉತ್ತರದ ಭಾವನಾ.ಯು.ಎಸ್​, ಭಾವನಾ.ಆರ್​​., ಸಾಯಿರಾಮ್​, ಬೆಂಗಳೂರು ದಕ್ಷಿಣದ ಶಾಂಭವಿ ಎಚ್​.ವಿ., ತುಮಕೂರಿನ ಹರ್ಷಿತ್​ ಸಿ., ಮಂಗಳೂರಿನ ಸಿಂಚನಾ ಲಕ್ಷ್ಮೀ, ಕೃಪಾ ಕೆ.ಆರ್. ಅನುಪಮಾ ಕಾಮತ್​, ಚಿನ್ಮಯಿ, ಹಾಸನದ ಪ್ರಗತಿ ಎಂ.ಗೌಡ ಮತ್ತು ಅಭಿನ್​ ಬಿ. – 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಎಸ್ಸೆಸ್ಸಲ್ಸಿ ಫಲಿತಾಂಶ : ಬಾಲಕಿಯರೇ ಮೇಲುಗೈ


ಬೆಂಗಳೂರು: ಮಾರ್ಚ್​/ಏಪ್ರಿಲ್​ನಲ್ಲಿ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶೇ. 73.7 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಹಾಸನ ಜಿಲ್ಲೆ 89.33 ರಷ್ಟು ಫಲಿತಾಂಶವನ್ನು ದಾಖಲಿಸುವ ಮೂಲಕ ತನ್ನ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. 88.49 ರಷ್ಟು ಫಲಿತಾಂಶದ ಮೂಲಕ ರಾಮನಗರ ಜಿಲ್ಲೆ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ( ಶೇ. 88.34), ನಾಲ್ಕನೇ ಸ್ಥಾನದಲ್ಲಿ ಉತ್ತರ ಕನ್ನಡ( ಶೇ.88.12), ಐದನೇ ಸ್ಥಾನದಲ್ಲಿ ಉಡುಪಿ(ಶೇ. 87.97) ಹಾಗೂ ಕೊನೆ ಸ್ಥಾನದಲ್ಲಿ ಯಾದಗಿರಿ ಜಿಲ್ಲೆ ಇದೆ.

ಎಸ್ಸೆಸ್ಸಲ್ಸಿ ಫಲಿತಾಂಶ: ಹಾಸನ ಪ್ರಥಮ ಯಾದಗಿರಿ ಲಾಸ್ಟ್

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಒಟ್ಟಾರೆ ಶೇ. 73.7 ರಷ್ಟು ಫಲಿತಾಂಶ ಬಂದಿದೆ. ಶೇಕಡಾವಾರು ಫಲಿತಾಂಶದ ಆಧಾರದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ ಯಾದಗಿರಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಈ ಬಾರಿ ಮೂರು ರೀತಿಯಲ್ಲಿ ಜಿಲ್ಲಾವಾರು ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡಿದ್ದು, ಶೇಖಡಾವಾರು ಫಲಿತಾಂಶ, ಆವರೇಜ್‌ ಮಾರ್ಕ್ಸ್‌, 60ಕ್ಕಿಂತ ಕಡಿಮೆ ಅಂಕದ ಆಧಾರದ ಮೇಲೆ ಜಿಲ್ಲಾವಾರು ಫಲಿತಾಂಶವನ್ನು ನಿಗದಿಮಾಡಲಾಗಿದೆ.
ಹಾಸನ ಮೊದಲ ಸ್ಥಾನ ಪಡೆದುಕೊಂಡಿದ್ದು, ಎರಡನೆಯದಾಗಿ ರಾಮನಗರ, ಮೂರನೆಯದಾಗಿ ಬೆಂಗಳೂರು ಗ್ರಾಮಾಂತರ ಬಳಿಕ ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ಮಂಗಳೂರು ಮತ್ತು ಕೋಲಾರ ಕ್ರಮವಾಗಿ ಸ್ಥಾನ ಪಡೆದುಕೊಂಡಿವೆ. ಯಾದಗಿರಿ ಶೇ. 53.95 ಫಲಿತಾಂಶವನ್ನು ಪಡೆಯುವ ಮೂಲಕ ಕೊನೆಯ ಸ್ಥಾನವನ್ನು ಪಡೆದಿದೆ.
ಹಾಸನ ಶೇ. 89.33, ರಾಮನಗರ ಶೇ. 88.49, ಬೆಂಗಳೂರು ಗ್ರಾಮಾಂತರ 88.34, ಉತ್ತರ ಕನ್ನಡ 88.12, ಉಡುಪಿ 87.97, ಚಿತ್ರದುರ್ಗ 87.46, ಮಂಗಳೂರು 86.73, ಕೋಲಾರ 86.71ರಷ್ಟು ಫಲಿತಾಂಶ ಲಭ್ಯವಾಗಿದೆ.ಕಳೆದ ವರ್ಷದ ಫಲಿತಾಂಶದಲ್ಲಿ ಉಡುಪಿಯು ಪ್ರಥಮ ಸ್ಥಾನ ಪಡೆದಿತ್ತು. ಆದರೆ, ಈ ವರ್ಷ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಈ ಬಾರಿ ನಾಲ್ಕನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಚಿಕ್ಕೋಡಿ, ಮಂಗಳೂರು, ಮಧುಗಿರಿ, ಬೆಳಗಾವಿ, ಹಾಸನ ಕ್ರಮವಾಗಿ ಸ್ಥಾನ ಪಡೆದಿದ್ದವು.

ಬೆಂಗಳೂರಿನಲ್ಲಿ 801 ವಿದೇಶಿಗರ ಅಕ್ರಮ ವಾಸ : ಹೈಕೋರ್ಟ್ಗೆ ಮಾಹಿತಿ


ಬೆಂಗಳೂರು:ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರು ಎಷ್ಟೇ ಅಲರ್ಟ್ ಆಗಿದ್ರೂ ಇನ್ನೂ ನಗರದಲ್ಲಿ ಅಕ್ರಮವಾಗಿ ವಿದೇಶಿಗರು ವಾಸವಿದ್ದಾರೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಒಟ್ಟು 801 ವಿದೇಶಿಗರು ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಹೈಕೋರ್ಟ್​​ಗೆ ಮಾಹಿತಿ ಕೊಟ್ಟಿದ್ದಾರೆ.ವೀಸಾ ಅವಧಿ ಮುಗಿದಿದ್ದರೂ ವಿದೇಶಿ ಪ್ರಜೆಗಳು ಸ್ವದೇಶಕ್ಕೆ ಮರಳದೇ ನಗರದಲ್ಲಿ ವಾಸವಿದ್ದಾರೆ. ಈ ಪೈಕಿ ಆಫ್ರಿಕಾ ಮೂಲದವರೇ ಹೆಚ್ಚು ಎನ್ನಲಾಗಿದೆ. 801 ಅಕ್ರಮ ವಿದೇಶಿ ವಲಸಿಗರ ಪೈಕಿ 92 ಜನ ವೀಸಾ ನವೀಕರಣಕ್ಕೆ ಅರ್ಜಿ ಹಾಕಿದ್ದಾರೆ. ಸದ್ಯ ಅಧಿಕಾರಿಗಳು 92 ಅರ್ಜಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಕ್ರಮವಾಗಿ ನೆಲೆಸಿರುವ ವಿದೇಶಿಗರಲ್ಲಿ 57 ಜನರ ಮಾಹಿತಿಯೇ ನಗರ ಪೊಲೀಸರಿಗಿಲ್ಲ.

ಸಾಲ ವಾಪಸ್ ಕೊಡುತ್ತೇನೆ ಅಂದ್ರು ಬ್ಯಾಂಕ್ ಗಳು ಒಪ್ಪುತ್ತಿಲ್ಲ : ವಿಜಯ್ ಮಲ್ಯ


ಲಂಡನ್:ಜೆಟ್ ಏರ್ವೇಸ್ ಗೆ ಬಂದೊದಗಿರುವ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸುಸ್ತಿದಾರ ವಿಜಯ್ ಮಲ್ಯ, "ನಾನು ಪೂರ್ತಿ ಸಾಲ ವಾಪಸ್ ಕೊಡ್ತೀನಿ ಅಂದರೂ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ಹೇಳಿದಾರೆ.
ಜೆಟ್ ಏರ್ವೇಸ್ ಗೆ ಬಂದೊದಗಿರುವ ಸ್ಥಿತಿಯನ್ನು ತಮ್ಮ ಕಿಂಗ್ ಫಿಶರ್ ಏರ್ಲೈನ್ಸ್ ನ ಪತನಕ್ಕೆ ಹೋಲಿಕೆ ಮಾಡಿರುವ ವಿಜಯ್ ಮಲ್ಯ, "ಕಿಂಗ್ ಫಿಶರ್ ಸೇರಿದಂತೆ ಭಾರತದ ಅನೇಕ ವಿಮಾನ ಸಂಸ್ಥೆಗಳು ಕುಸಿದಿವೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ನಿಜವಾದ ಉದ್ಯಮ ವಿಫಲವಾಗುತ್ತದೆ. ನಾನು ತೆಗೆದುಕೊಂಡಿರುವ ಸಾಲವನ್ನು ಶೇ.100 ರಷ್ಟು ವಾಪಸ್ ಪಾವತಿ ಮಾಡುತ್ತೇನೆ ಅಂದರೂ ನನ್ನ ಮೇಲೆ ಸಿಬಿಐ/ಇಡಿ ಕ್ರಿಮಿನಲ್ ಪ್ರಕರಣ ದಾಖಲಿಸಿವೆ.

ಮತಎಣಿಕೆ ವೇಳೆ 270 ಸಿಬ್ಬಂದಿ ಮೃತ್ಯು


ಮತ ಎಣಿಕೆ ಮಾಡುತ್ತಿದ್ದ 270 ಚುನಾವಣಾ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.ಮಿಲಿಯನ್ ಗಟ್ಟಲೆ ಬ್ಯಾಲೆಟ್ ಪೇಪರ್ ಗಳನ್ನು ಎಣಿಕೆ ಮಾಡಲು ದೀರ್ಘಾವಧಿ ಕಾರ್ಯ ನಿರ್ವಹಣೆ ಮಾಡಿರುವ ಪರಿಣಾಮ ಒಟ್ಟು 1,878 ಅಸ್ವಸ್ಥಗೊಂಡಿದ್ದು, 270 ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಏ.17 ರಂದು ನಡೆದ ಮತದಾನದ ಮತ ಎಣಿಕೆಗೆ 7 ಮಿಲಿಯನ್ ಜನರು ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಇಡಿ ಕೆಲಸ ಮಾಡಿರುವ ಪರಿಣಾಮದಿಂದಾಗಿ ತೀವ್ರವಾಗಿ ಆಯಾಸಗೊಂಡು ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಕೆಪಿಯು ನ ಚುನಾವಣಾ ಆಯೋಗದ ವಕ್ತಾರರು ಮಾಹಿತಿ ನೀಡಿದ್ದಾರೆ.ಚುನಾವಣಾ ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂಸತ್, ಅಧ್ಯಕ್ಷೀಯ ಚುನಾವಣೆಯನ್ನು ಒಟ್ಟಿಗೆ ನಡೆಸಲಾಗಿದ್ದು 260 ಮಿಲಿಯನ್ ಜನರು ಇದೇ ಮೊದಲ ಬಾರಿಗೆ ಒಟ್ಟಿಗೆ ಮತದಾನ ಮಾಡಿದ್ದರು.

55 ಮೀನುಗಾರರು 5 ನಾಗರಿಕರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ


ಕರಾಚಿ:ಪಾಕಿಸ್ಥಾನದ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದ 55 ಭಾರತೀಯ ಮೀನುಗಾರರು ಹಾಗೂ 5 ನಾಗರಿಕರನ್ನು ಪಾಕಿಸ್ಥಾನ ಸರಕಾರ ಸದ್ಭಾವನೆಯ ಸಂಕೇತವಾಗಿ ಸೋಮವಾರ ಬಿಡುಗಡೆಗೊಳಿಸಿದೆ
ಕರಾಚಿಯ ಮಾಲಿರ್‌ ಜೈಲಿನಿಂದ ಸೋಮವಾರ ಬಿಡುಗಡೆಗೊಂಡ ಮೀನುಗಾರರು ಮತ್ತು ನಾಗರಿಕರನ್ನು ಬಿಗಿಭದ್ರತೆಯೊಂದಿಗೆ ಕರಾಚಿ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಕರೆ ತರಲಾಯಿತು. ಅನಂತರ, ಅವರನ್ನು ಬ್ಯುಸಿನೆಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಲಾಹೋರ್‌ಗೆ ಕಳುಹಿಸಲಾಯಿತು. ಲಾಹೋರ್‌ಗೆ ಬಂದಿಳಿದ ಅವರನ್ನು ವಾಘಾಗೆ ಕರೆದೊಯ್ದು ಭಾರತೀಯ ಪಡೆಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗಿದೆ.ಎ. 7ರಂದು 100 ಮೀನುಗಾರರನ್ನು ಬಿಡುಗಡೆಗೊಳಿಸಿದ್ದ ಪಾಕಿಸ್ಥಾನ, ಎ. 14ರಂದು ಇತರ 100 ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.

ಮೋದಿ ವಿರುದ್ಧ ಬಿಎಸ್ ಎಫ್ ಯೋಧ ಸ್ಪರ್ಧೆ


ಲಖನೌ: ಬಿಜೆಪಿಯ ರಾಷ್ಟ್ರೀಯವಾದ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಿರುವ ಸಮಾಜವಾದಿ ಪಕ್ಷ, ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿಯಾಗಿ, ವಜಾಗೊಂಡ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ.
ನಾಮಪತ್ರ ಸಲ್ಲಿಕೆ ಸಮಯ ಕೊನೆಗೊಳ್ಳುವ ಕೆಲವೇ ಕ್ಷಣಗಳ ಮೊದಲು ತೇಜ್ ಬಹದ್ದೂರ್ ಉಮೇದುವಾರಿಕೆ ಸಲ್ಲಿಸಿದರು. ಬಿಎಸ್‌ಎಫ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಕುರಿತು ಬಹದ್ದೂರ್ ಆರೋಪ ಮಾಡಿದ್ದರು.
ಈ ಮುನ್ನ ಮೋದಿ ಅವರ ಎದುರಾಳಿಯಾಗಿ ಶಾಲಿನಿ ಯಾದವ್ ಅವರನ್ನು ಎಸ್‌ಪಿ ಘೋಷಿಸಿತ್ತು. ಕಾಂಗ್ರೆಸ್‌ನಿಂದ ಬಂದಿದ್ದ ಅವರ ಸ್ಪರ್ಧೆಗೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.

ಮುಂಬೈ ವಿರುದ್ಧ ಕೊಲ್ಕತ್ತಾಗೆ 34 ರನ್ ಗಳ ಸೋಲು


ಐಪಿಎಲ್ ನ 12 ನೇ ಆವೃತ್ತಿಯ 47 ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಮುಂಬೈ ತಂಡವನ್ನು 34 ರನ್ ಗಳ ಅಂತರದಿಂದ ಮಣಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡದ ವಿರುದ್ಧ ಕೋಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು.
ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಲ್ಕತ್ತಾ ತಂಡ ರೋಹಿತ್ ಶರ್ಮಾ ಕ್ವಿನ್ಟನ್ ಡೆ ಕಾಕ್ ವಿಕೆಟ್ ಪಡೆದ ಆರಂಭಿಕ ಅಘಾತ ನೀಡಿದರು.ಹಾರ್ದಿಕ್ ಪಾಂಡ್ಯ 34 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ಮುಂಬೈ ತಂಡದ ಗೆಲುವಿನ ಆಸೆ ಚಿಗುರುವಂತೆ ಮಾಡಿದರಾದರೂ ಏಕಾಂಗಿ ಹೋರಾಟ ವ್ಯರ್ಥವಾಗಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ವಿರುದ್ಧ 7ವಿಕೆಟ್ ನಷ್ಟಕ್ಕೆ ಮುಂಬೈ ತಂಡ 198 ಗಳನ್ನು ದಾಖಲಿಸಿ ಸೋಲೊಪ್ಪಿಕೊಂಡಿತು.

SSF ಶಿವಮೊಗ್ಗ ಸುಗರ್ ಫ್ಯಾಕ್ಟರಿ ಯೂನಿಟ್ ವತಿಯಿಂದ ಸಂಸ್ಥಾಪನ ದಿನಾಚರಣೆ


ಶಿವಮೊಗ್ಗ:  ಸುನ್ನೀ ವಿದ್ಯಾರ್ಥಿ ಸಂಘಟನೆಯಾದ *ಎಸ್ಸೆಸ್ಸೆಫ್* ಇದರ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ  ಶಿವಮೊಗ್ಗ ಸುಗರ್ ಫ್ಯಾಕ್ಟರಿ ಯುನಿಟ್ ವತಿಯಿಂದ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನಾಚರಣೆ ಯನ್ನು ಆಚರಿಸಲಾಯಿತು. ಜಮಾಅತ್ ಖತೀಬರಾದ ಹಮೀದ್ ಸಖಾಫಿ, ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಹಾಗೂ ಐ.ಟಿ.ಎಂ  ಶಿವಮೊಗ್ಗ ಇದರ ಅಸಿಸ್ಟಂಟ್ ಮ್ಯಾನೇಜರ್, ಎಸ್ಸೆಸ್ಸೆಫ್ ಕೊಡಗು ಜಿಲ್ಲಾ  ಕೌನ್ಸಿಲರಾಗಿದ ರಾಝಿಕ್ರವರ ನೇತೃತ್ವದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಎಸ್ಸೆಸ್ಸೆಫ್ ಸಂಘಟನಾ ಸದಸ್ಯರು ಭಾಗವಹಿಸಿದ್ದರು.
ವರದಿ ಕೃಪೆ : ರಾಝಿಕ್ ಸುಂಟಿಕೊಪ್ಪ

ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸಫ್ ಸಂಸ್ಥಾಪನಾ ದಿನಾಚರಣೆ


ವಿರಾಜಪೇಟೆ: ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಸಂಸ್ಥೆ *ಅನ್ವಾರುಲ್ ಹುದಾ* ದಲ್ಲಿ *ಎಸ್ಸೆಸ್ಸೆಫ್ ಸಂಸ್ಥಾಪನಾ ದಿನ* ಆಚರಿಸಲಾಯಿತು.  ದಅವಾ ಮುದರ್ರಿಸರಾದ *ಇಸ್ಮಾಯಿಲ್ ಸಖಾಫಿ ಉಸ್ತಾದ್ ಹಾಗೂ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದರ* ನೇತೃತ್ವದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಶಿಹಾಬುದ್ದೀನ್ ಅನ್ವಾರಿ ಯವರ  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಅನ್ವಾರಿ ಅಲ್.ಅಹ್ಸನಿ ಉದ್ಘಾಟಿಸಿದರು. ಖಮರುದ್ದೀನ್ ಅನ್ವಾರಿ ರವರು ಮುಖ್ಯ ಭಾಷಣ ಮಾಡಿದರು. ಸುಹೈಲ್ ಲ್ ಮತ್ತು ತಂಡದಿಂದ ಕ್ರಾಂತಿ ಗೀತೆ ಹಾಡುವ ಮೂಲಕ ಸಭೆಯಲ್ಲಿ ಕ್ರಾಂತಿಯ ಅಲೆಯನ್ನೆಬ್ಬಿಸಿದರು.ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ, ಉಪನ್ಯಾಸಕರಾದ ಇಬ್ರಾಹಿಂ ಮಾಷ್ಟರ್  ಖಮರುದ್ದೀನ್ ಸಖಾಫಿ ಉಪಸ್ಥಿತರಿದ್ದರು. ಶಾಫಿದ್ ನಂಜರಾಯಪಟ್ಟಣ ಸ್ವಾಗತಿಸಿ ಶಹೀರ್ ಎರುಮಾಡ್ ವಂದಿಸಿದರು.

ಸೋಮವಾರಪೇಟೆಯ ಕರ್ಕಳ್ಳಿಯಲ್ಲಿ SSF ಸ್ಥಾಪಕ ದಿನಾಚರಣೆ: ದ್ವಜಾರೋಹಣ


ಸೋಮವಾರಪೇಟೆ : ಸುನ್ನಿ ಮುಸ್ಲಿಂಮರ ಅಧಿಕೃತ ಸಂಘಟನೆಗಳೊಂದಾದ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( SSF ) ನ ಸ್ಥಾಪಕ ದಿನವಾದ 29 ಎಪ್ರಿಲ್ ಇಂದು ಸೋಮವಾರಪೇಟೆ ಸಮೀಪ ಕರ್ಕಳ್ಳಿ ಶಾಖೆಯಲ್ಲಿ ಧ್ವಜಾರೋಣ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸಫ್ ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆ, ಎಸ್ ವೈ ಎಸ್ ಜಿಲ್ಲಾ ಸದಸ್ಯರಾದ ಅಲಿ ಸಖಾಫಿ ಕಲ್ಕಂದೂರ್ ಹಾಗೂ ಇನ್ನಿತರ SSF SYS ಕಾರ್ಯಕರ್ತರು ಭಾಗವಹಿಸಿದ್ದರು. ಹತ್ತಿರದ ಯೂನಿಟ್ ಗಳಾದ ಕಾಗಡಿಕಟ್ಟೆ , ಕೊಡ್ಲಿಪೇಟೆ , ಶನಿವಾರಸಂತೆ , ಹೊಸತೋಟ ಯೂನಿಟ್ ಗಳಲ್ಲಿಯೂ ಧ್ವಜಾರೋಹಣ ನಡೆಯಿತು.

ಕೊಂಡಂಗೇರಿಯಲ್ಲಿ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ

ಕೊಂಡಂಗೇರಿಯಲ್ಲಿ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ:

ಚೆಟ್ಟಳ್ಳಿ: ಕೆ.ವೈ.ಸಿ ಯುವ ಸಂಘ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪ್ರಗತಿಪರ ಚಿಂತಕ ವಕೀಲರಾದ ಕುಂಞಿ ಅಬ್ದುಲ್ಲಾ ಮಾತನಾಡಿ ಕೊಂಡಂಗೇರಿ ಆಶಿಫ್ ಆಪು ಅವರ  ಸಾರಥ್ಯದಲ್ಲಿ ಕಳೆದ ವರ್ಷ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟವನ್ನು ಆರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ  ಎಂದರು‌.

ಕ್ರೀಡೆಯ ಮೂಲಕ ಸಮುದಾಯದ ಸೌಹಾರ್ದತೆಯನ್ನು ಬೆಳೆಸಲು ಸಾಧ್ಯ.ಶೈಕ್ಷಣಿಕ ರಂಗದಲ್ಲಿ ಮುಸ್ಲಿಂ ಸಮುದಾಯ ಪ್ರಗತಿ ಕಾಣಬೇಕಾಗಿದೆ ಎಂದರು.
ಅಲ್ಲದೇ ಕೆ.ವೈ.ಸಿ ಕೊಂಡಂಗೇರಿ ಯುವಕ ಸಂಘದ ಸಾರಥ್ಯದಲ್ಲಿ ಜಿಲ್ಲೆಯ ಶೈಕ್ಷಣಿಕ ,ಸಮಾಜಿಕ ರಂಗದಲ್ಲಿ ಸಾಧನೆಗೈದವರನ್ನು ಗುರುತಿಸಿ  ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ರೀತಿಯ ಸಹಕಾರವಿರಲಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರಾದ ಯೂಸುಫ್ ಮಾತನಾಡಿ ಕೊಂಡಂಗೇರಿಯ ಯುವಕ ಆಶಿಫ್ ಅವರ ಪ್ರಾರಂಭಿಸಿದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಮುಂದಿನ ದಿನಗಳಲ್ಲಿ ಜಿಲ್ಲೆ , ರಾಜ್ಯ, ರಾಷ್ಟ್ರ ಹಾಗೂ ಮಟ್ಟದಲ್ಲಿ ಹೆಸರಗಳಿಸುವಂತೆ ಆಗಲಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡವರು ಹಾಗೂ ಪುಲ್ವಾಮ ದಾಳಿಯಲ್ಲಿ ಮಡಿದ ಸೈನಿಕರಿಗೆ ಹಾಗೂ ನೂಜಿಲ್ಯಾಂಡ್ ಮಸೀದಿ ದಾಳಿಯಲ್ಲಿ ಮಡಿದವರಿಗೆ  ಹಾಗೂ ಶ್ರೀಲಂಕಾ ಚರ್ಚ್ ಮೇಲೆ ನಡೆದ ದಾಳಿಯಲ್ಲಿ ಮಡಿದವರಿಗೆ ಮೌನಾಚರಣೆ ಮೂಲಕ ಗೌರವಿಸಲಾಯಿತು.
ಪಂದ್ಯಾಟವನ್ನು ರಾಷ್ಟ್ರೀಗೀತೆ ಹಾಡುವುದರ ಮೂಲಕ ಚಾಲನೆ ನೀಡಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಶಿಫ್, ಪಂದ್ಯಾಟದ ಪ್ರಾಯೋಜಕರದ ಉಂಬಾಯಿ ಗೋಣಿಕೊಪ್ಪ, ಟಿ.ಎಸ್.ಕೆ ಕೊಂಡಂಗೇರಿ, ವಿರಾಜಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ರಾಫಿ, ಪಿ.ಎಫ್‌ಐ ಜಿಲ್ಲಾಧ್ಯಕ್ಷ ಹಾರಿಸ್, ರಶೀದ್ ಎಡಪಲಾ, ಶಾದುಲಿ ಗ್ರಾಮ ಪಂಚಾಯತಿ ಅಧ್ಯಕ್ಷರರು ಹಾಲುಗುಂದ, ಕೆ.ವೈ.ಸಿ ಅಧ್ಯಕ್ಷರಾದ ನಾಸೀರ್, ಕ್ರಿಯೇಟಿವ್ ಖಲೀಲ್, ಮತ್ತಿತ್ತರರು ಇದ್ದರು.
*ಉದ್ಘಾಟನಾ ಪಂದ್ಯಾಟ:*
ಚಾಮಿಯಾಲ್ ಹಾಗೂ ನಾಪೋಕ್ಲು ನಡುವಿನ ಪಂದ್ಯಾಟದಲ್ಲಿ ಟ್ರೈಬ್ರೇಕರ್ ನಲ್ಲಿ ೩-೪ ಗೋಲುಗಳ ಅಂತರದಿಂದ ನಾಪೋಕ್ಲು ತಂಡವನ್ನು ಮಣಿಸಿ ಚಾಮಿಯಾಲ್ ತಂಡವು ಗೆದ್ದಿತು.

ನಾಳೆ ಎಸ್ಸೆಸ್ಸಲ್ಸಿ ಫಲಿತಾಂಶ: ಫಲಿತಾಂಶ ನೋಡುವುದು ಹೇಗೆ?



ಬೆಂಗಳೂರು, (ಏ.29): ನಾಳೆ ಎಸ್​​ಎಸ್​ಎಲ್​ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ಈ ಬಗ್ಗೆ ಇಂದು (ಸೋಮವಾರ) ಮಾಹಿತಿ ನೀಡಿರುವ ಎಸ್​​ಎಸ್​ಎಲ್​ಸಿ ಬೊರ್ಡ್ ನಿರ್ದೇಶಕಿ ವಿ.ಸುಮಂಗಲಾ, ಮೇನಾಳೆ ( ಎಪ್ರಿಲ್ 30) ಹತ್ತನೇ ತರಗತಿಯ (SSLC) ಫಲಿತಾಂಶ ಪ್ರಕಟ ಆಗಲಿದೆ.ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್​​ನಲ್ಲಿ ಫಲಿತಾಂಶ ಲಭ್ಯ ಆಗಲಿದೆ. www.kaceb.kar.nic.in ಮತ್ತು www.karresults.nic.inನಲ್ಲಿ ಫಲಿತಾಂಶ ಪ್ರಕಟ ಆಗಲಿದೆ.ಪಾಸಾದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್​​ಗೆ ಮೆಸೇಜ್ ಮಾಡಲಾಗುತ್ತದೆ. ಆಯಾ ಶಾಲೆಗಳಲ್ಲಿ ಮರುದಿನ ಫಲಿತಾಂಶ ಪ್ರಕಟ ಆಗಲಿದೆ ಎಂದು ಮಾಹಿತಿ ನೀಡಿದರು.ಮಾರ್ಚ್​ 21 ರಿಂದ ಏಪ್ರಿಲ್​ 4 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು.
* ಅಧಿಕೃತ ವೆಬ್ ತಾಣ www.kaceb.kar.nic.in ಎಂದು ಗೂಗಲ್‌ನಲ್ಲಿ ಟೈಪ್ ಮಾಡಿ. ನಂತರ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ.
* ನಂತರ 'SSLC Result' ಎನ್ನುವ ಲಿಂಕ್ ಕ್ಲಿಕ್ ಮಾಡಿ.ಅಲ್ಲಿ ಬಾಕ್ಸ್ ಓಪನ್ ಆಗುತ್ತೆ.
* ಅಲ್ಲಿ ಕೇಳುವ ನಿಮ್ಮ ರೋಲ್ ನಂಬರ್ (ಹಾಲ್ ಟಿಕೇಟ್ ನಂಬರ್) ಹಾಗೂ ಇನ್ನಿತರ ಮಾಹಿತಿ ನಮೂದಿಸಿ.
* submit ಬಟನ್ ಒತ್ತಿ.
* ಫಲಿತಾಂಶದ ಪ್ರತಿ ಪಡೆಯಲು ಅಲ್ಲೇ ಇರುವ ಡೌನ್‌ಲೋಡ್ ಮೇಲೆ ಕ್ಲಿಕ್ಕಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಕೆ.ವೈ.ಸಿ.ಸಿ ಕಡಂಗ ಚಾಂಪಿಯನ್

ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಕೆ.ವೈ.ಸಿ.ಸಿ ಕಡಂಗ ಚಾಂಪಿಯನ್..


ಮಡಿಕೇರಿ: ವಿರಾಜಪೇಟೆ ಸಮೀಪದ ಕಡಂಗದ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ವತಿಯಿಂದ ಕಳೆದ ಒಂದು ವಾರದಿಂದ ನಡೆದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಕೆ.ವೈ.ಸಿ.ಸಿ ಕಡಂಗ ತಂಡವು ಫೈನಲ್ ನಲ್ಲಿ‌ ಆಶಸ್ ಗೋಣಿಕೊಪ್ಪ ತಂಡವನ್ನು ಮಣಿಸಿ ೧೬ ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ತಂಡವಾಗಿ ಹೊರಮ್ಮಿದೆ.ಆಶಸ್ ಗೋಣಿಕೊಪ್ಪ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಫೈನಲ್ ಪಂದ್ಯಾಟದಲ್ಲಿ ಟಾಸ್  ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಶಸ್ ತಂಡವು ೭ ಓವರುಗಳಿಗೆ ೨೬ ಗಳಿಸಲಷ್ಟೇ ಶಕ್ತರಾದರು.
ಎದುರಾಳಿ ಕೆ.ವೈ.ಸಿ.ಸಿ ತಂಡವು ಆರಂಭಿಕ ಆಟಗಾರರಾದ ನೌಷಾದ್ ಹಾಗೂ ಅಸ್ಕರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ೩ ಓವರುಗಳಿಗೆ ಗುರಿ ತಲುಪಿ ಚಾಂಪಿಯನ್ ತಂಡವಾಗಿ ಹೊರಮ್ಮಿದೆ.
 ತೃತೀಯ ಸ್ಥಾನಕ್ಕಾಗಿ ನಡೆದ,  ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಗಳಾದ ಬ್ಯ್ಲಾಕ್ ಕೋಬ್ರಾ ಹಾಗೂ ಕೌವ್ ಬಾಯ್ಸ್ ನಡುವಿನ ಪಂದ್ಯದಲ್ಲಿ ಕೋಬ್ರಾ ತಂಡ ಗೆಲುವು ಸಾಧಿಸಿ ತೃತೀಯ ಸ್ಥಾನ ಪಡೆದರೆ, ಕೌವ್ ಬಾಯ್ಸ್ ತಂಡ ನಾಲ್ಕನೇ ಸ್ಥಾನವನ್ನು ಪಡೆಯಿತು.
ಕ್ರೀಡಾಕೂಟದ ಕಮಲ್ ಕ್ಯಾಚ್ ಪ್ರಶಸ್ತಿಯನ್ನು ಗೋಣಿಕೊಪ್ಪ ಆಶಸ್   ತಂಡದ  ಜಂಶೀರ್, ಬೆಸ್ಟ್ ಕೀಪರ್ ಕೋಬ್ರಾ ತಂಡದ ನಾಸೀರ್, ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಕೆ.ವೈ.ಸಿ.ಸಿ ತಂಡದ ನೌಷಾದ್, ಅತ್ಯುತ್ತಮ ದಾಳಿಗಾರ ಕೌವ್ ಬಾಯ್ಸ್ ತಂಡದ ನವಾಫ್, ಸ್ಟೈಲಿಶ್ ಪ್ಲೆಯರ್ ಆಫ್ ದಿ ಟೂರ್ನಮೆಂಟ್ ನೌಷಾದ್ ಅರಫಾ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಶಸ್ ಗೋಣಿಕೊಪ್ಪ ತಂಡದ ಫಾಯಿಸ್, ಕ್ರೀಡಾ ಕೂಟದಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಕೆ.ವೈ.ಸಿ.ಸಿ ತಂಡದ  ನೌಷಾದ್ ಕಡಂಗ , ಬೆಸ್ಟ್ ಟೀಂ ಮಾಲ್ದಾರೆ, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಅಸ್ಕರ್ , ಹಾಗೂ ಮ್ಯಾನ್ ಆಪ್ ದಿ ಸೀರಿಯಸ್ ಪ್ರಶಸ್ತಿಯನ್ನು ಕೆ.ವೈ.ಸಿ .ಸಿ ತಂಡದ ನೌಷಾದ್ ಪಡೆದುಕೊಂಡರು.
ಕ್ರೀಡಾಕೂಟದ ವೀಕ್ಷಕ ವಿವರಣೆಗಾರರಾಗಿ ಹರ್ಷಾದ್ ಸಿ.ಎಂ,  ನೌಫಲ್ , ಅಸ್ಕರ್  ದುಬೈ , ಮನಾಫ್,   ಸ್ಕೋರರ್ ಆಗಿ ಜುನೈದ್ ಹಾಗೂ ತೀರ್ಪುಗಾರರಾಗಿ ಅಹ್ಮದ್, ಸತ್ತಾರ್, ಕರೀಂ ನೌವಾಫ್ ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭ:

ಕೊಡಗು ಮುಸ್ಲಿಂ ಕಪ್ ೧೬ ನೇ ವರ್ಷದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಅರಫ ಫ್ರೆಂಡ್ಸ್ ಅಧ್ಯಕ್ಷರಾದ ಅಬ್ದುರಹಮಾನ್ ಅರಫಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲರಾದ ಕುಂಞಿ ಅಬ್ದುಲ್ಲಾ  ಕೊಡಗು ಮುಸ್ಲಿಂ ಕಪ್ ಸಂಸ್ಥಾಪಕ ರಶೀದ್ ಎಡಪಾಲ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೆ.ಸಲಾಂ, ಅರಫಾ ಫ್ರೆಂಡ್ಸ್ ಉಪಾಧ್ಯಕ್ಷರಾದ ಸಮೀರ್,ವಿರಾಜಪೇಟೆ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಬ್ದುರಹಮಾನ್ , ಜಮಾಹತ್ ಅಧ್ಯಕ್ಷರಾದ ಅಬೂಬಕರ್, ಸಬೀರ್ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಖಾದರ್ ಹಾಕತ್ತೂರು ,ಮೊಹಿದ್ದೀನ್ , ಹಾಗೂ ಛಾಯಾಗ್ರಾಹಕ ರಶೀದ್ ಕೊಳಕೇರಿ ಇದ್ದರು.

 *ಬಾಕ್ಸ*
ಸನ್ಮಾನ
ಅರಫಾ ಕಡಂಗ ಫ್ರೆಂಡ್ಸ್ ಅಧ್ಯಕ್ಷರಾದ ಅಬ್ದುರಹಮಾನ್ ಅರಫಾ, ಕೊಡಗು ಮುಸ್ಲಿಂ ಕಪ್ ಸಂಸ್ಥಾಪಕ ರಶೀದ್ ಎಡಪಾಲ ಹಾಗೂ ಛಾಯಾಗ್ರಹಕ ರಶೀದ್ ಕೊಳಕೇರಿ ಅವರನ್ನು ನೆನಪಿನ ಕಾಣಿಕೆ ‌ನೀಡಿ ಸನ್ಮಾನಿಸಲಾಯಿತು.
*ಕೆ.ಎಂ ಇಸ್ಮಾಯಿಲ್ ಕಂಡಕರೆ*

ಮೇ ೦೪ ಹಾಗೂ ೦೫ ರಿಂದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ


ಮೇ ೦೪, ಹಾಗೂ ೦೫ ರಂದು ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯ
ಚೆಟ್ಟಳ್ಳಿ: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟವು ಮೇ ೦೪ ಹಾಗೂ ೦೫ ರಂದು ಮೂರ್ನಾಡಿನ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಜಿ ಅಬ್ದುರಹಮಾನ್ ತಿಳಿಸಿದ್ದಾರೆ.
ವಾಲಿಬಾಲ್ ಪಂದ್ಯಾಟವು ಏಪ್ರಿಲ್ ೨೯ ಹಾಗೂ ೩೦ ನಡೆಸಲು ತೀರ್ಮಾನಿಸಿದ್ದು , ಪದವೀಧರ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿರುವ ಕಾರಣ ಪಂದ್ಯಾಟವು ಮೇ ೦೪ ಶನಿವಾರ ಹಾಗೂ ೦೫ ರ ಭಾನುವಾರ ನಡೆಯಲಿದೆ. ಆದ್ದರಿಂದ ತಂಡದ ಮಾಲೀಕರು ಹಾಗೂ ಆಟಗಾರರು ಸಂಘದೊಂದಿಗೆ ಸಹಕರಿಸಬೇಕಾಗಿ ತಿಳಿಸಿದ್ದಾರೆ.

Redmi ಗೆ ತೀವ್ರ ಪೈಪೋಟಿ ಒಡ್ಡುತ್ತಿರುವ Realme



ಕಡಿಮೆ ದರ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜನಸಾಮಾನ್ಯರಿಗೆ ಉತ್ತಮ ಸ್ಮಾರ್ಟ್‌ಫೋನ್‌ ನೀಡುವ ನಿಟ್ಟಿನಲ್ಲಿ Redmiಗೆ ತೀವ್ರ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಮುನ್ನುಗ್ಗುತ್ತಿರುವ Realme ಸಂಸ್ಥೆ 'ಸ್ಪೀಡ್‌ ಅವೇಕನ್ಸ್‌' ಎಂಬ ಟ್ಯಾಗ್‌ ಲೈನ್‌ನೊಂದಿಗೆ Realme 3 Pro ಮತ್ತು ಆರಂಭಿಕ ಹಂತದ ಫೋನ್‌ ಬಳಕೆದಾರರಿಗೆ ಅತ್ಯಾಕರ್ಷಕವಾಗಿರುವ Realme C2 ಎಂಬ ಎರಡು ಸ್ಮಾರ್ಟ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಏಪ್ರಿಲ್‌ 29ರ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮತ್ತು Realme ವೆಬ್‌ಸೈಟ್‌ನಲ್ಲಿ Realme 3 Pro ಮಾರಾಟ ಆರಂಭವಾಗಲಿದೆ. ಮೇ 15ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮತ್ತು Realme ವೆಬ್‌ಸೈಟ್‌ನಲ್ಲಿ ರಿಯಲ್‌ಮಿ C2 ಮಾರಾಟ ಆರಂಭವಾಗಲಿದೆ. Realme ನವದೆಹಲಿಯ ಸುಭಾಶ್‌ ನಗರದ ಪೆಸಿಫಿಕ್‌ ಮಾಲ್‌ನಲ್ಲಿ ಏಪ್ರಿಲ್‌ 27ರಂದು ತನ್ನ ಮೊದಲ ಪಾಪ್‌ಅಪ್‌ ಮಳಿಗೆ ಆರಂಭಿಸಲಿದ್ದು, ಅಭಿಮಾನಿಗಳು Realme 3 Pro ಮೊದಲ ಮಾರಾಟಕ್ಕೆ ಮುಂಚಿತವಾಗಿಯೇ ಇಲ್ಲಿ ಮೊಬೈಲ್‌ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
                                         

ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಬೆಂಕಿ


ಬೆಂಗಳೂರು: ನಗರದ ರೈಲಿನ (76508) ಎಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದ್ದು, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
                         promoted
ಕೋಲಾರದಿಂದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ಕಡೆಗೆ ರೈಲು ಬರುತ್ತಿತ್ತು. ಈ ವೇಳೆಯಲ್ಲಿ ವೈಟ್‌ಫೀಲ್ಡ್‌ನ ಹೂಡಿ ರೈಲ್ವೆ ನಿಲ್ದಾಣದ ಬಳಿ ಸಂಜೆ 5.45ರ ಸುಮಾರಿಗೆ 11ನೇ ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು.ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ಕಂಡು ಪ್ರಯಾಣಿಕರು ಆತಂಕಗೊಂಡರು. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಹೂಡಿ ರೈಲು ನಿಲ್ಲಿಸಿ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಚಿಗರಿಯಲ್ಲಿ ಸೆನ್ಸಾರ್‌ ದೋಷ: ಸಂಚಾರ ವ್ಯಸ್ತ


ಹುಬ್ಬಳ್ಳಿ:ಚಿಗರಿ ಬಸ್‌ನ ಸೆನ್ಸಾರ್‌ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಬಸ್‌ನಿಲ್ದಾಣ ಮುಂಭಾಗದಲ್ಲಿರುವ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಫ್ಲಾಟ್ಫಾರ್ಮ್ನಲ್ಲಿ ಬಸ್‌ ಕೆಟ್ಟು ನಿಂತು ಉಳಿದ ಬಸ್‌ಗಳೆಲ್ಲ ಮಿಶ್ರಪಥದಲ್ಲಿ ಸಂಚರಿಸಿದವು.
ಧಾರವಾಡದಿಂದ ಹುಬ್ಬಳ್ಳಿ ಸಿಬಿಟಿಗೆ ಹೊರಟಿದ್ದ ಬಿಆರ್‌ಟಿಎಸ್‌ ಬಸ್‌ ಇಲ್ಲಿನ ಹಳೇ ಬಸ್‌ ಮುಂಭಾಗದ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹೊರಡುವ ಸಂದರ್ಭದಲ್ಲಿ ಸೆನ್ಸಾರ್‌ ಸಮಸ್ಯೆ ಕಂಡುಬಂತು. ಇದರಿಂದ ಬಸ್‌ನ ಎಲ್ಲಾ ಕಾರ್ಯಗಳು ಸ್ಥಗಿತಗೊಂಡವು. ಸುಮಾರು ಮೂರು ಗಂಟೆಗಳ ಕಾಲ ನಿಲ್ದಾಣದಲ್ಲೇ ಬಸ್‌ ನಿಂತಿತ್ತು. ಇದರಿಂದಾಗಿ ಉಳಿದ ಬಸ್‌ಗಳು ಪ್ರಯಾಣಿಕರನ್ನು ತುರ್ತು ನಿರ್ಗಮನ ಬಾಗಿಲು ಮೂಲಕ ಕೆಳಗೆ ಇಳಿಸುತ್ತಿರುವುದು ಕಂಡು ಬಂತು. ಮೂರು ಗಂಟೆಗಳ ಕಾಲ ತಂತ್ರಜ್ಞರು ದುರಸ್ತಿಗೊಳಿಸಿದರು.

IPL 2019: RCB ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ!


ದೆಹಲಿ(ಏ.28): ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ಸಜ್ಜಾಗಿದೆ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಹೆದ್ದ ಡೆಲ್ಲಿ ಬ್ಯಾಟಿಂಗ್‌ಆಯ್ಕೆ ಮಾಡಿಕೊಂಡಿದೆ.RCB ತಂಡದಲ್ಲಿ 3 ಬದಲಾವಣ ಮಾಡಲಾಗಿದೆ. ಮೊಯಿನ್ ಆಲಿ ಬದಲು ಹೆನ್ರಿಚ್ ಕ್ಲೆಸೆನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಟಿಮ್ ಸೌಥಿ ಬದಲು ಶಿವಂ ದುಬೆ ಹಾಗೂ ಅಕ್ಷದೀಪ್ ನಾಥ್ ಬದಲು ಗುರುಕೀರತ್ ಸಿಂಗ್ ತಂಡ ಸೇರಿಕೊಂಡಿದ್ದಾರೆ,.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 11 ಪಂದ್ಯಗಳಲ್ಲಿ 4 ಗೆಲುವು 7 ಸೋಲು ಕಂಡಿದೆ.

IPL 2019: RCB ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ!

ದೆಹಲಿ(ಏ.28): ಹ್ಯಾಟ್ರಿಕ್ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ಸಜ್ಜಾಗಿದೆ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಹೆದ್ದ ಡೆಲ್ಲಿ ಬ್ಯಾಟಿಂಗ್‌ಆಯ್ಕೆ ಮಾಡಿಕೊಂಡಿದೆ.RCB ತಂಡದಲ್ಲಿ 3 ಬದಲಾವಣ ಮಾಡಲಾಗಿದೆ. ಮೊಯಿನ್ ಆಲಿ ಬದಲು ಹೆನ್ರಿಚ್ ಕ್ಲೆಸೆನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಟಿಮ್ ಸೌಥಿ ಬದಲು ಶಿವಂ ದುಬೆ ಹಾಗೂ ಅಕ್ಷದೀಪ್ ನಾಥ್ ಬದಲು ಗುರುಕೀರತ್ ಸಿಂಗ್ ತಂಡ ಸೇರಿಕೊಂಡಿದ್ದಾರೆ,.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 11 ಪಂದ್ಯಗಳಲ್ಲಿ 4 ಗೆಲುವು 7 ಸೋಲು ಕಂಡಿದೆ.

200 ಚೀನಾ ಕಂಪನಿಗಳು ಭಾರತಕ್ಕೆ..


ವಾಷಿಂಗ್ಟನ್‌[ಏ.28]: ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆ ಹುಟ್ಟುಹಾಕಿದ ಬೆನ್ನಲ್ಲೇ, ಅಮೆರಿಕದ ದೈತ್ಯ ಕಂಪನಿಗಳು ಭಾರತದತ್ತ ಮುಖಮಾಡಿವೆ. ಲೋಕಸಭೆ ಚುನಾವಣೆಯ ಬಳಿಕ ಅಮೆರಿಕದ ಸುಮಾರು 200 ಕಂಪನಿಗಳು ತಮ್ಮ ಉತ್ಪಾದನಾ ಕೇಂದ್ರವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲಿವೆ.ಕಮ್ಯುನಿಸ್ಟ್‌ ಚೀನಾಕ್ಕೆ ಪರ್ಯಾಯ ಹೂಡಿಕೆಗೆ ಕಂಪನಿಗಳಿಗೆ ಭಾರತದಲ್ಲಿ ಯಥೇಚ್ಛ ಅವಕಾಶಗಳು ಇರುವ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿವೆ ಎಂದು ಅಮೆರಿಕ- ಭಾರತ ಕಾರ್ಯತಂತ್ರ ಹಾಗೂ ಸಹಭಾಗಿತ್ವ ವೇದಿಕೆ (ಯುಎಸ್‌ಐಎಸ್‌ಪಿಎಫ್‌) ತಿಳಿಸಿದೆ.
ಈ ನಿಟ್ಟಿನಲ್ಲಿ ಭಾರತದಲ್ಲಿ ಹೊಸ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ಅಗತ್ಯವಿದೆ. ಭಾರತ ಮತ್ತು ಅಮೆರಿಕ ಮಧ್ಯೆ ಮುಕ್ತ ವ್ಯಾಪಾರಿ ಒಪ್ಪಂದಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿ ನಾವು ಮುಂಬರುವ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆ ಎಂದು ಯುಎಸ್‌ಐಎಸ್‌ಪಿಎಫ್‌ ಅಧ್ಯಕ್ಷ ಮುಕೇಶ್‌ ಅಘಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಶ್ರೀಲಂಕಗೆ ಅನಗತ್ಯ ಪ್ರವಾಸ ಕೈಗೊಳ್ಳಬೇಡಿ : ಕೇಂದ್ರ ಸರಕಾರ



ಹೊಸದಿಲ್ಲಿ: ಶ್ರೀಲಂಕಾಗೆ ಅನಗತ್ಯ ಪ್ರವಾಸ ಕೈಗೊಳ್ಳದಂತೆ ಭಾರತ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಈಸ್ಟರ್ ಭಾನುವಾರದಂದು 250ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ ಉದ್ಭವಿಸಿದ ಭದ್ರತಾ ಬೆದರಿಕೆಗಳ ಕಾರಣಕ್ಕೆ ಕೇಂದ್ರ ಸರಕಾರ ಈ ಸಲಹೆ ಜಾರಿ ಮಾಡಿದೆ.
ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ 'ಪ್ರವಾಸ ಸಲಹೆ'ಯಲ್ಲಿ, ತುರ್ತು ಪ್ರವಾಸ ಕೈಗೊಳ್ಳಲೇಬೇಕಾದ ಸಂದರ್ಭಗಳಲ್ಲಿ ಕೊಲಂಬೋ, ಕ್ಯಾಂಡಿ, ಹಂಬಂಟೋಟಾ ಮತ್ತು ಜಾಫ್ನಾದಲ್ಲಿರುವ ಭಾತೀಯ ಹೈಕಮಿಷನ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಣೆ ಹಿನ್ನೆಲೆ : ಪಾಕ್ ಗೆ ಅಮೇರಿಕಾ ನಿರ್ಬಂಧ


ವಾಷಿಂಗ್ಟನ್: ಅಮೆರಿಕದಿಂದ ಗಡಿಪಾರಾದ ಮತ್ತು ವೀಸಾ ಅವಧಿ ಮುಗಿದಿದ್ದರೂ ನೆಲೆಸಿರುವ ಪಾಕ್ ಪ್ರಜೆಗಳನ್ನು ವಾಪಸು ಕರೆಯಿಸಿಕೊಳ್ಳಲು ನಿರಾಕರಿಸಿದ ಪಾಕಿಸ್ತಾನದ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ. ಜತೆಗೆ ಪಾಕ್​ನ ರಾಯಭಾರ ಅಧಿಕಾರಿ ಸೇರಿದಂತೆ ಇನ್ನಿತರ ಉನ್ನತ ಮಟ್ಟದ ಅಧಿಕಾರಿಗಳ ವೀಸಾ ಕೂಡ ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ಟ್ರಂಪ್ ಆಡಳಿತ ಖಡಕ್ ಎಚ್ಚರಿಕೆ ನೀಡಿದೆ.
ವಲಸೆ ಮತ್ತು ಪೌರತ್ವ ಕಾಯ್ದೆಯ ಸೆಕ್ಷನ್ಸ್ 243(ಬಿ) ಅನ್ವಯ ಆಂತರಿಕ ಭದ್ರತಾ ಇಲಾಖೆಯಿಂದ ನೋಟಿಸ್ ಪಡೆದಿರುವ ರಾಷ್ಟ್ರಗಳ ಪ್ರಜೆಗಳಿಗೆ ವಲಸೆ ಮತ್ತು ವಲಸೆಯೇತರ ವೀಸಾಗಳನ್ನು ತಡೆಹಿಡಿಯುವ ಅಧಿಕಾರ ವಿದೇಶಾಂಗ ಇಲಾಖೆ ಕಾರ್ಯದರ್ಶಿಗೆ ಇದೆ. ಆದರೆ ನಿರ್ಬಂಧ ಹಾಕಲಾಗಿದ್ದರೂ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.ಪಾಕ್​ನಿಂದ ಸತತ ಕಡೆಗಣನೆ: ಅಮೆರಿಕ ನಿರ್ಬಂಧ ವಿಧಿಸಿರು ವುದರಿಂದ ಪಾಕ್​ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಪಾಕ್​ನ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಅಮೆರಿಕದ ಇಂಥ ಎಚ್ಚರಿಕೆಯನ್ನು ಪಾಕ್ ಕಡೆಗಣಿಸಿತ್ತು.

ಮೋದಿ ಹಿಟ್ಲರ್ ಗೆ ಸಮ : ಮಲ್ಲಿಕಾರ್ಜುನ ಖರ್ಗೆ


ಮುಂಬೈ: ಅಡಾಲ್ಪ್ ಹಿಟ್ಲರ್ ಕೂಡ ಪ್ರಜಾತಂತ್ರ ವ್ಯವಸ್ಥೆ ಮೂಲಕ ಅಧಿಕಾರಕ್ಕೆ ಬಂದು ಸರ್ವಾಧಿಕಾರಿಯಾಗಿದ್ದ. ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ಹಾದಿಯಲ್ಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.ಮುಂಬೈನಲ್ಲಿ ಶನಿವಾರ ಮಾತನಾಡಿದ ಖರ್ಗೆ, ಮೋದಿ ಹೆಸರಿನಲ್ಲಿ ಚುನಾವಣೆ ನಡೆಸಲಾಗುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪಕ್ಷ ಅಥವಾ ಸಿದ್ಧಾಂತದ ಹೊರತಾಗಿ ವ್ಯಕ್ತಿ ಹೆಸರಲ್ಲಿ ಮತ ಕೇಳಲಾಗುತ್ತಿದೆ. ಮೋದಿ ಸರ್ಕಾರ್ ಎಂದು ಹೇಳುವ ಮೂಲಕ ಪಕ್ಷ, ದೇಶ ಇವರಿಗೆ ಮುಖ್ಯವಲ್ಲ ಎನ್ನುವಂತಾಗಿದೆ ಎಂದು ಕಿಡಿಕಾರಿದರು.

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು
ಮಡಿಕೇರಿ ಏ.೨೭ : ನಿಷೇಧಿತ ನಕ್ಸಲ್ ಸಂಘಟನೆಯ ಶಂಕಿತ ನಕ್ಸಲ್ ಮುಖಂಡ, ೨೦೧೦ರಲ್ಲಿ ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟುವಿನ ಮಾಂಗುಡಿಮಲೆ ಎಂಬಲ್ಲಿ ಪ್ರತ್ಯಕ್ಷನಾಗಿ ಅಲ್ಲಿನ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿಯ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿಡಲಾಗಿದ್ದ ರೂಪೇಶ್‌ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಬಾರಿ ಜಿಂದಾಬಾದ್, ಮಾವೋವಾದಿಗಳು ಅಪರಾಧಿಗಳಲ್ಲ, ಹುತಾತ್ಮ ನಕ್ಸಲರು ಅಮರವಾಗಲಿ ಎಂದು ಘೋಷಣೆಗಳನ್ನು ಕೂಗಿದ.
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಅವರು ರಜೆಯಲ್ಲಿರುವುದರಿಂದ ೧ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರ ಮುಂದೆ ಶಂಕಿತ ನಕ್ಸಲ್ ಮುಖಂಡ ರೂಪೇಶ್‌ನನ್ನು ಹಾಜರುಪಡಿಸಲಾಯಿತು. ಇಂದು ಸರಕಾರಿ ವಕೀಲರು ಹಾಜರಿಲ್ಲದಿರುವುದರಿಂದ, ಸರಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗಧಿಗೊಳಿಸಿದ ನ್ಯಾಯಾಧೀಶರಾದ ಪವನೇಶ್ ಅವರು ಮುಂದಿನ ವಿಚಾರಣೆಯನ್ನು ಮೇ ೨೨ಕ್ಕೆ ಮುಂದೂಡಿದರು.
::: ಪ್ರಕರಣ ಹಿನ್ನೆಲೆ :::
ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದು, ಒಟ್ಟು ೩೮ ಪ್ರಕರಣಗಳಿವೆ. ಈತನ ವಿರುದ್ದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೨ ಪ್ರತ್ಯೇಕ ಪ್ರಕರಣಗಳೂ ದಾಖಲಾಗಿದೆ. ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ೨ ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ ೬ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶನಿವಾರ ವಿಚಾರಣೆ ನಡೆಸಿದ ಬಳಿಕ ಆರೋಪಿ ರೂಪೇಶನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯದ ಹೊರಭಾಗ ನಗರ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.

ಕೊಡಗು ಮುಸ್ಲಿಂ ಕಪ್ ಕ್ರಿಕೆಟ್: ಕೆ.ವೈ.ಸಿ.ಸಿ ಕಡಂಗ ಫೈನಲ್ಗೆ .:ಮಳೆಯಿಂದ ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ ಹಾಗೂ ಆಶಸ್ ಗೋಣಿಕೊಪ್ಪ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ರದ್ದು:, ನಾಳೆ ಬೆಳಗ್ಗೆ ಎರಡನೇ ಸೆಮಿಫೈನಲ್ ಪಂದ್ಯ..

ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ: ಕೆ.ವೈ.ಸಿ.ಸಿ ಕಡಂಗ  ಫೈನಲ್ ಗೆ

ಚೆಟ್ಟಳ್ಳಿ:ವಿರಾಜಪೇಟೆ ಸಮೀಪದ ಕಡಂಗದ ಪ್ರೌಢ ಶಾಲಾ ಮೈದಾನದಲ್ಲಿ  ಅರಫಾ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ ೧೬ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ  ಕೆ.ವೈ.ಸಿ‌ .ಸಿ ಕಡಂಗ ತಂಡವು ಕೌವ್ ಬಾಯ್ಸ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಮೊದಲನೇ ಸೆಮಿಫೈನಲ್ ಪಂದ್ಯವು ಕೆ.ವೈ‌.ಸಿ.ಸಿ ಕಡಂಗ ಹಾಗೂ ಕೌವ್ ಬಾಯ್ಸ್ ವಿರಾಜಪೇಟೆ ನಡುವೆ ನಡೆಯಿತು‌.ಮೊದಲು ಬ್ಯಾಟ್ ಮಾಡಿದ ಕೆ.ವೈ.ಸಿ.ಸಿ ತಂಡವು ೦೫ ಓವರುಗಳಿಗೆ  ೭೬ ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೌವ್ ಬಾಯ್ಸ್ ತಂಡವು ೨೫ ರನ್ ಗಳ ಸೋಲು ಕಂಡರು. ಕೆ.ವೈ.ಸಿ.ಸಿ  ತಂಡವು ಫೈನಲ್ ಪ್ರವೇಶಿಸಿದರು.
ಕೆ.ವೈ.ಸಿ.ಸಿ ಕಡಂಗ ಹಾಗೂ ಆತಿಥೇಯ ಅರಫಾ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಅರಫಾ ತಂಡವು ನಿಗದಿತ ೦೪ ಓವರುಗಳಿಗೆ
೩೭ ರನ್ ಕಲೆ ಹಾಕಿತು.ಈ ಗುರಿಯನ್ನು ಬೆನ್ನಟ್ಟಿದ ಕೆ.ವೈ.ಸಿ.ಸಿ ತಂಡವು ೩ ಓವರುಗಳಿಗೆ ಗುರಿ ತಲುಪಿ ಸೆಮಿಫೈನಲ್ ಪ್ರವೇಶಿಸಿದರು.
ಮಾಯಮುಡಿ ಹಾಗೂ ಕೋಬ್ರಾ  ವಿರಾಜಪೇಟೆ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಾಯಮುಡಿ ತಂಡವು ೦೪ ಓವರುಗಳಿಗೆ ೩೭ ರನ್ ಗಳಿಸಲಷ್ಟೇ ಶಕ್ತರಾದರು.
ಕೋಬ್ರಾ ತಂಡವು ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯವು ಮಾಲ್ದಾರೆ ಹಾಗೂ ಕೌವ್ ಬಾಯ್ಸ್ ವಿರಾಜಪೇಟೆ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಾಲ್ದಾರೆ ತಂಡವು ೦೫ ಓವರುಗಳಿಗೆ ೪೪ ರನ್ ಗಳಿಸಿತು.
ಕೌವ್ ಬಾಯ್ಸ್ ತಂಡವು ೪ ಓವರುಗಳಿಗೆ ಗುರಿ ತಲುಪಿ ಸೆಮಿಫೈನಲ್ ಗೆ  ಪ್ರವೇಶಿಸಿದರು.
 *ಸಮಾರೋಪ ಸಮಾರಂಭ:* ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ೧೬ ನೇ ವರ್ಷದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲಾಂ', ವಕೀಲರಾದ ಜಿ‌.ಅಪ್ಪಣ್ಣ, ಮುಸ್ಲಿಂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಖಾದರ್ ಹಾಕತ್ತೂರು, ಕೊಡಗು ಮುಸ್ಲಿಂ ಕ್ರಿಕೆಟ್ ಸಂಸ್ಥಾಪಕ ರಶೀದ್ ಎಡಪಲಾ, ಕಾರ್ಯದರ್ಶಿ ಸೈಫ್ ಮೂರ್ನಾಡು, ಅರಫಾ ಫ್ರೆಂಡ್ಸ್ ವ್ಯವಸ್ಥಾಪಕರಾದ ಅಬ್ದುರಹಮಾನ್ , ಜಮಾಹತ್ ಅಧ್ಯಕ್ಷರಾದ ಕೆ.ಎಂ ಇಬ್ರಾಹಿಂ, ಅಬೂಬಕರ್, ಗ್ರಾಮ ಪಂಚಾಯತಿ ಸದಸ್ಯರಾದ ಅಬ್ದುಲ್ಲಾ, ಸುಬೀರ್, ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು  ಅರಫಾ ಫ್ರೆಂಡ್ಸ್ ಸದಸ್ಯರಾದ ನೌಫಲ್ ತಿಳಿಸಿದ್ದಾರೆ 
 *ಬಾಕ್ಸ್*
ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಕೆ.ವೈ.ಸಿ.ಸಿ ತಂಡದ ನೌಷಾದ್ ಕೌವ್ ಬಾಯ್ಸ್ ವಿರಾಜಪೇಟೆ ತಂಡದ ವಿರುದ್ಧ ೧೬ ಬಾಲ್ ಗಳಿಗೆ ೫೫ ರನ್ ಕಲೆ ಹಾಕಿ.ತಂಡದ ಗೆಲುವಿಗೆ  ಕಾರಣರಾದರು. ಅಲ್ಲದೇ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.
*ಕೆ.ಎಂ ಇಸ್ಮಾಯಿಲ್ ಕಂಡಕರೆ*
*ಇಂದಿನ ಸೆಮಿಫೈನಲ್ ಪಂದ್ಯಾಟ*
ಆಶಸ್ ಗೋಣಿಕೊಪ್ಪ-ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ

ಕಡವೆ ಬೇಟೆ ಬಂಧನ..


ಕೊಡಗು ಪೊಲೀಸರ ಭರ್ಜರಿ ಬೇಟೆ : ಕುಟ್ಟ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿದ ಗ್ಯಾಂಗ್ ಅಂದರ್
ಮಡಿಕೇರಿ ಏ.27 :
ಕೊಡಗು, ಕೇರಳ ಗಡಿಯ ಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿದ ಆರು ಮಂದಿಯ ತಂಡವನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ- ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಹಿತ ಕಡವೆ ಮಾಂಸ, ಬೇಟೆಗೆ ಬಳಸಿದ ಆಯುಧಗಳು ಮತ್ತು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದರು.
ಪೊನ್ನಂಪೇಟೆಯ ಮಾಪಿಳ್ಳೆ ತೋಡು ನಿವಾಸಿಗಳಾದ ಕೆ.ಬಿ.ಸಿದ್ದಿಕ್, ಎಂ.ಹೆಚ್.ಶಮೀರ್, ಎ.ಯು.ಸಮೀರ್, ನಾಪೋಕ್ಲುವಿನ ಕುಂಜಿಲ ಗ್ರಾಮದ ಕೆ.ಇ.ಇಸ್ಮಾಯಿಲ್, ಕೆ.ಎ.ಯೂಸಫ್ ಹಾಗೂ ಕೆ.ಎ.ಮೊಹಮ್ಮದ್ ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಒಂದು ಬಂದೂಕು, ಇನ್ನಿತರ ಆಯುಧಗಳು, ಸುಮಾರು ೧೫೦ ಕೆ.ಜಿ. ಕಡವೆ ಮಾಂಸ, ಮಾರುತಿ ಸೆಲೋರಿಯಾ ಕಾರು ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್ ಕೆ.ನಾಗೇಶ್, ಸಿಬ್ಬಂದಿಗಳಾದ ಕೆ.ಎಸ್.ಅನಿಲ್‌ಕುಮಾರ್, ಬಿ.ಎಲ್.ಯೋಗೇಶ್ ಕುಮಾರ್, ಕೆ.ಆರ್.ವಸಂತ, ಎಂ.ಎಂ.ನಿರಂಜನ್ ಹಾಗೂ ಚಾಲಕ ಕೆ.ಎಸ್.ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡಕ್ಕೆ ವರಿಷ್ಠಾಧಿಕಾರಿಗಳು ಇದೇ ಸಂದರ್ಭ ೧೦ ಸಾವಿರ ರೂ. ನಗದು ಬಹುಮಾನ ಘೋಷಿಸಿದರು

ಪಾಕಿಸ್ತಾನ ವಿರುದ್ಧದ ಅಂಡರ್-19 ಸರಣಿ ರದ್ದುಗೊಳಿಸಿದ ಶ್ರೀಲಂಕಾ ಕ್ರಿಕೆಟ್


ಕೊಲಂಬೋ, ಏಪ್ರಿಲ್ 27: ಕಳೆದ ವಾರ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸುಮಾರು 253 ಜನ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಪಾಕಿಸ್ತಾನ ವಿರುದ್ಧ ಆಡಬೇಕಿದ್ದ ಅಂಡರ್ 19 ಕ್ರಿಕೆಟ್‌ ಸರಣಿಯನ್ನು ಶ್ರೀಲಂಕಾ ಕ್ರಿಕೆಟ್ ಶನಿವಾರ (ಏಪ್ರಿಲ್ 27) ರದ್ದುಗೊಳಿಸಿದೆ.ಸರಣಿ ನಿಮಿತ್ತ ಏಪ್ರಿಲ್ 30ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡ ಸಿದ್ಧವಾಗಿತ್ತು. ಮೇ 3ರಂದು ಪಾಕ್ ತಂಡ ಲಂಕಾ ವಿರುದ್ಧ ಮೊದಲ ಪಂದ್ಯವನ್ನು ಆಡುವುದರಲ್ಲಿತ್ತು. ಆದರೆ ಯೋಜಿತ ಸರಣಿಯನ್ನು ಸದ್ಯಕ್ಕೆ ರದ್ದುಗೊಳಿಸಿ, ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು, 'ಶ್ರೀಲಂಕಾಕ್ಕೆ ಪಾಕಿಸ್ತಾನ ಪ್ರವಾಸವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಗಿದೆ.ಭದ್ರತೆಯ ಕಾರಣದಿಂದಾಗಿ ಶ್ರೀಲಂಕಾ ಕ್ರಿಕೆಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ' ಎಂದು ಮಾಹಿತಿ ನೀಡಿದ್ದಾರೆ.

ಮಹಾಮಳೆಯ ಪರಿಸ್ಥಿತಿ ಎದರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ:ಆತಂಕ ಪಡದಂತೆ ಮನವಿ


ಮಹಾಮಳೆಯ ಪರಿಸ್ಥಿತಿ ಎದುರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ : ಆತಂಕ ಪಡದಂತೆ ಮನವಿ
ಮಡಿಕೇರಿ ಏ.೨೭ :  ಪ್ರಸಕ್ತ ಸಾಲಿನಲ್ಲೂ ಜಿಲ್ಲೆಯಲ್ಲಿ ಮಹಾಮಳೆಯಾದರೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ತುರ್ತು ಸೇವೆಗಳನ್ನು ಒದಗಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಡಳಿತ ಅಭಯ ನೀಡಿದೆ.
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉಂಟಾಗಬಹುದಾದ ಹಾನಿಯ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ವಿಪತ್ತು ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸಲು ಮುಂಜಾಗ್ರತೆ ವಹಿಸಲಾಗುತ್ತಿದೆ.
ಜಿಲ್ಲಾಡಳಿತದ ವತಿಯಿಂದ ತುರ್ತು ಪರಿಸ್ಥಿತಿ ಪರಿಹಾರ ಮತ್ತು ಪುನರ್ ನಿರ್ಮಾಣ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ಹಿರಿಯರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡವು ಸಾರ್ವಜನಿಕರಿಗೆ ಅಗತ್ಯ ಮಾಹಿತಿ, ಸಲಹೆ ನೆರವನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಮತ್ತು ಸ್ಥಳಾಂತರಿಸುವ ಸಮಿತಿ, ಶೋಧನೆ ಮತ್ತು ರಕ್ಷಣಾ ಸಮಿತಿ, ಪ್ರಥಮ ಚಿಕಿತ್ಸಾ, ಸಾಮೂಹಿಕ ಅಪಘಾತ ನಿರ್ವಹಣೆ ಸಮಿತಿ, ಆಶ್ರಯ ನಿರ್ವಹಣೆ, ಪರಿಹಾರ ನಿರ್ವಹಣೆ, ಹಾನಿ ಮೌಲ್ಯಮಾಪನ ಸಮಿತಿ, ಪ್ರಾಣಿ ರಕ್ಷಣಾ ಸಮಿತಿ, ಪೌಷ್ಠಿಕ ಆಹಾರ ವಿತರಣಾ ಸಮಿತಿ, ಸ್ವಚ್ಛತಾ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೇ ಇದೇ ಸಮಿತಿಯನ್ನು ತಾಲೂಕು, ಗ್ರಾಮ ಮತ್ತು ಪಂಚಾಯತ್ ಮಟ್ಟದಲ್ಲಿ ಕೂಡ ರಚಿಸಲು ಕ್ರಮ ವಹಿಸಲಾಗಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಯೂನಿಸೆಫ್, ಕ್ರೈಸ್ಟ್ ಯೂನಿವರ್ಸಿಟಿ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ತಯಾರಿಕೆ ಮತ್ತು ತರಬೇತಿಗೆ ಕ್ರಮವಹಿಸಲಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
::: ಎನ್‌ಡಿಆರ್‌ಎಫ್ ನಿಯೋಜನೆ :::
ಜಿಲ್ಲಾಡಳಿತದ ಕೋರಿಕೆಯಂತೆ ಸರ್ಕಾರ ಎನ್‌ಡಿಆರ್ ಎಫ್‌ನ ಒಂದು ತಂಡವನ್ನು ಪೂರ್ವ ನಿಯೋಜಿತವಾಗಿ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲಿದೆ. ಈ ತಂಡವು ಮೇ ಕೊನೆಯ ವಾರದಿಂದ ಕಾರ್ಯ ಪ್ರವೃತ್ತವಾಗಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸಿದ್ದವಿದೆ. ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸುವ ಬಗ್ಗೆ ಈಗಾಗಲೇ ಜಿಯೋಲಾಜಿಕಲ್ ಸರ್ವೆ ಇಂಡಿಯಾ ಅಧಿಕಾರಿಗಳು ಸರ್ವೆ ನಡೆಸಿದ್ದು, ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದೆ. ಜಿಎಸ್‌ಐ ನೆರವಿನೊಂದಿಗೆ ವೈಜ್ಞಾನಿಕ ಕ್ರಮದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.
ಅತಿವೃಷ್ಟಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ನೀಡಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಸಮಯದಲ್ಲಿ ತುರ್ತು ಸೇವೆ ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ.

ಹೊಸ 20 ರೂಪಾಯಿ ನೋಟು ಶೀಘ್ರ ಚಲಾವಣೆಗೆ : ಆರ್ ಬಿ ಐ


ನವದೆಹಲಿ, ಏಪ್ರಿಲ್ 27: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೊಟುಗಳನ್ನು ಬಿಡುಗಡೆ ಮಾಡಲಿದೆ.ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇರುವ ಹೊಸ ಸರಣಿಯ ನೋಟುಗಳು ಚಲಾವಣೆಗೆ ಬರಲಿದ್ದು, ಆರ್‌fಬಿಐನ ಹೊಸ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ.
'ಹೊಸ ಮಾದರಿಯ 20 ರೂ. ಮುಖಬೆಲೆಯ ನೋಟುಗಳು ಹಸಿರು-ಹಳದಿ ವರ್ಣದ್ದಾಗಿರುತ್ತವೆ. ಒಂದು ಬದಿಯಲ್ಲಿ ಗಾಂಧೀಜಿ ಭಾವಚಿತ್ರ, ಆರ್‌ಬಿಐ ಚಿಹ್ನೆ, ಅಶೋಕ ಸ್ತಂಭ ಮತ್ತು ಆರ್‌ಬಿಐ ಗವರ್ನರ್ ಸಹಿ ಇರುತ್ತದೆ. ಇನ್ನೊಂದು ಬದಿಯಲ್ಲಿ ಭಾರತದ ಹದಿನಾಲ್ಕು ಭಾಷೆಗಳಲ್ಲಿ ರೂಪಾಯಿ ಮೌಲ್ಯ ಬರೆದಿರುವುದರ ಜತೆಗೆ, ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಎಲ್ಲೋರಾದ ಕಲ್ಲಿನ ಗುಹೆಗಳ ಚಿತ್ರ ಇರಲಿದೆ' ಎಂದು ಆರ್‌ಬಿಐನ ಹೇಳಿಕೆ ತಿಳಿಸಿದೆ.

ಭಾರೀ ಮಳೆ ಸಾಧ್ಯತೆ :ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಕೊಡಗು ಜಿಲ್ಲಾಡಳಿತ ಸೂಚನೆ


ಭಾರೀ ಮಳೆ ಸಾಧ್ಯತೆ : ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಕೊಡಗು ಜಿಲ್ಲಾಡಳಿತ ಸೂಚನೆ
ಮಡಿಕೇರಿ ಏ.೨೭ : ಭಾರತೀಯ ಹವಾಮಾನ ಇಲಾಖೆ ವರದಿಯನ್ವಯ ಏ.೨೭ ರ ಸಂಜೆಯಿಂದ ಏ.೩೦ ರವರೆಗೆ ಹಿಂದೂ ಮಹಾಸಾಗರದ ಪೂರ್ವಭಾಗ ಮತ್ತು ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿನ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ.
ಕೊಡಗು ಜಿಲ್ಲೆಯಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಜಿಲ್ಲಾಡಳಿತ ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ. ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ಏ.೩೦ ಮತ್ತು ಮೇ ೨ ರ ನಂತರ ಚಂಡಮಾರುತ ಉಂಟಾಗಲಿದ್ದು, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಾದ್ಯಂತ ಬಸ್ ನಿಲ್ದಾಣಗಳಲ್ಲಿ ತಪಾಸಣೆ


ಬೆಂಗಳೂರು, ಏ.27- ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಚುರುಕುಗೊಳಿಸಲು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಸೂಚಿಸಿದ್ದಾರೆ.
ಭಯೋತ್ಪಾದಕರು ಬೆದರಿಕೆ ಒಡ್ಡುತ್ತಿದ್ದಾರೆಂಬ ವದಂತಿ ಆಧರಿಸಿ ಕೆಎಸ್‍ಆರ್‍ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಭದ್ರತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮಾಡುವುದಲ್ಲದೆ. ವಾರಸುದಾರರು ಇಲ್ಲದೆ ಲಗೇಜುಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸೂಚಿಸಿದ್ದಾರೆ.ಅಲ್ಲದೆ ಕೆಎಸ್‍ಆರ್‍ಟಿಎಸ್ ಬಸ್ ನಿಲ್ದಾಣಗಳಲ್ಲಿ ಕೈಗೊಳ್ಳಲಾಗುತ್ತಿರುವ ಭದ್ರತಾ ವ್ಯವಸ್ಥೆ ಮತ್ತು ಮೇಲ್ವಿಚಾರಣೆ ಬಗ್ಗೆ ಪ್ರತಿ ಗಂಟೆಗೊಮ್ಮೆ ಸಂಸ್ಥೆಯ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸುತ್ತಿರಬೇಕು ಕೇಂದ್ರ ಕಚೇರಿಯೂ ನಿಯಂತ್ರಣ ಕೊಠಡಿಯೂ ವಾರದ 7ದಿನವು ದಿನದ 24ಗಂಟೆಗಳ ಕಾಲ ಪರಿಣಾಮಕಾರಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ.

ಘನಿ ಚಂಡಮಾರುತ : ಹವಾಮಾನ ಇಲಾಖೆ ಎಚ್ಚರಿಕೆ


ಬೆಂಗಳೂರು/ಚೆನ್ನೈ ಏ.27- ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತ ರಾತ್ರಿವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ಇದರಿಂದ ರಾಜ್ಯದಲ್ಲಿ ಭಾರೀಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.ಆದರೆ ಫನಿ ಚಂಡಮಾರುತ ತಮಿಳುನಾಡು ಕರಾವಳಿಯಿಂದ ಸು. 1100ಕಿ.ಮೀ. ದೂರದಲ್ಲಿ ಹಾಗೂ ಶ್ರೀಲಂಕಾದಿಂದ ಸು. 600ರಿಂದ 700 ಕಿ.ಮೀ. ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಅದು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗಾಳಿಯ ವೇಗ ಮತ್ತು ಮಳೆ ಪ್ರಮಾಣ ಹೆಚ್ಚಾಗುತ್ತಿದೆ.

ಭೂಮಿ ಮತ್ತು ಜೀವ ಸಂಕುಲದ ಸಂರಕ್ಷಣೆಯತ್ತ ಗಮನಹರಿಸಿ:ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಸಲಹೆ


ಭೂಮಿ ಮತ್ತು ಜೀವ ಸಂಕುಲದ ಸಂರಕ್ಷಣೆಯತ್ತ ಗಮನಹರಿಸಿ : ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಸಲಹೆ
ಮಡಿಕೇರಿ ಏ.೨೭ : ಭೂಮಿ ಪ್ರಾಕೃತಿಕ ಸಂಪತ್ತಾಗಿದ್ದು, ಭೂಮಿ ಇಲ್ಲದೆ ಮಾನವನ ಬದುಕು ಊಹಿಸುವುದು ಅಸಾಧ್ಯ. ಆದ್ದರಿಂದ ಭೂಮಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಅರಣ್ಯ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ’ವಿಶ್ವ ಭೂಮಿ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವನ ಅತೀ ಆಸೆಯಿಂದ ಜೀವ ಸಂಕುಲ ಅವನತಿಯತ್ತ ಸಾಗುತ್ತಿದೆ. ಹಾಗೆಯೇ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದನ್ನು ತಡೆಯಬೇಕು. ಭೂಮಿಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಮಂಜುನಾಥ್ ಅವರು ಮಾತನಾಡಿ ನಮ್ಮ ಮನೆಯಂತೆ ಭೂಮಿಯನ್ನು ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್‌ನ್ನು ಮರು ಬಳಕೆ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಪ್ಲಾಸ್ಟಿಕ್‌ನ್ನು ಉಪಯೋಗಿಸಲೇಬಾರದು. ಜೀವ ಸಂಕುಲ ಉಳಿಯಲು ಭೂಮಿ ಉಳಿಸಬೇಕು ಎಂದರು.
ಜಲ ಮಾಲಿನ್ಯ, ವಾಯು ಮಾಲಿನ್ಯದಿಂದ ಅನೇಕ ಜೀವ ಸಂಕುಲಕ್ಕೆ ತೊಂದರೆ ಸಿಲುಕುತ್ತವೆ. ಇದನ್ನು ತಪ್ಪಿಸಬೇಕು. ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಇರಬೇಕು. ರಾಷ್ಟ್ರದ ಪಶ್ಚಿಮಘಟ್ಟ ಇಡೀ ವಿಶ್ವದಲ್ಲಿಯೇ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಪ್ರದೇಶವಾಗಿದೆ ಎಂದರು.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಬೆಂಕಿ ಬೀಳದಂತೆ ನೋಡಿಕೊಂಡರೆ ಇನ್ನು ಮೂರು ವರ್ಷದಲ್ಲಿ ಉತ್ತಮ ಅರಣ್ಯ ಕಾಣಬಹುದು ಎಂದು ಅವರು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋವರ್ಧನ್ ಸಿಂಗ್ ಅವರು ಮಾತನಾಡಿ ಪ್ರಾಕೃತಿಕ ಸಂಪತ್ತನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭೂಮಿ ತಾಯಿಯಂತೆ. ಭೂಮಿ ಎಲ್ಲವನ್ನು ನೀಡಿದೆ. ಅದನ್ನು ಸಂರಕ್ಷಣೆ ಮಾಡಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ ಭೂಮಿ ಸಂರಕ್ಷಣೆ ಬಗ್ಗೆ ಪ್ರತಿನಿತ್ಯ ಜಾಗೃತಿ ವಹಿಸಬೇಕು. ಮಾನವನ ದುರಾಸೆಯಿಂದ ವಿಶ್ವದಲ್ಲಿ ೧೦ ಲಕ್ಷ ಜೀವ ಪ್ರಬೇಧಗಳು ವಿನಾಶದ ಅಂಚಿನಲ್ಲಿವೆ ಎಂದು ಅವರು ತಿಳಿಸಿದರು.
ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರಾದ ಟಿ.ಜಿ.ಪ್ರೇಮಕುಮಾರ್ ಅವರು ಮಾತನಾಡಿ ಇಡೀ ವಿಶ್ವದಲ್ಲಿ ಪಶ್ಚಿಮಘಟ್ಟ ಪ್ರದೇಶವು ೧೨ ನೇ ಸ್ಥಾನ. ಹಾಗೂ ದೇಶದಲ್ಲಿ ಎರಡನೇ ಸ್ಥಾನ ಹೊಂದಿದೆ. ಆದ್ದರಿಂದ ಪಶ್ಚಿಮಘಟ್ಟ ಪ್ರದೇಶ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.
’ಇರುವುದೊಂದೇ ಭೂಮಿ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕು. ಆದ್ದರಿಂದ ಭೂಮಿಯನ್ನು ಕಸದ ತೊಟ್ಟಿ ಮಾಡದೆ, ಕಲ್ಪವೃಕ್ಷ ಮಾಡಬೇಕು ಎಂದರು.’
ಜಿಲ್ಲೆಯ ಬಯಲು ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ವಿವಿಧ ಇಲಾಖೆಗಳು ಸಹಕರಿಸಬೇಕಾಗಿ ಪ್ರೇಮ ಕುಮಾರ್ ಅವರು ಕೋರಿದರು.
ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಪರಿಸರ ಸ್ನೇಹಿ ಪ್ರವಾಸಿ ತಾಣಗಳನ್ನಾಗಿ ನಿರ್ಮಾಣ ಮಾಡಬೇಕು. ಹಸಿ ಮತ್ತು ಒಣ ಕಸ ಬೇರ್ಪಡಿಸಬೇಕು. ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಬೇಕು ಎಂದರು.
ಪರಿಸರ ಜಾಗೃತಿ ಆಂದೋಲನದ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್ ಅವರು ಮಾತನಾಡಿ ಪಶ್ಚಿಮ ಘಟ್ಟ ಪ್ರದೇಶವು ಸುಮಾರು ೧೬೦೦ ಕಿ.ಮೀ. ಉದ್ದ ಹಾಗೂ ೧.೬೦ ಲಕ್ಷ ಚದರ ಕಿ.ಮೀ. ವ್ಯಾಪ್ತಿಯನ್ನು ಆವರಿಸಿದೆ. ಇದನ್ನು ಸಂರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಕೃತಿ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬೇಕು. ಜೀವರಾಶಿಗಳನ್ನು ಉಳಿಸಬೇಕು. ಪ್ರತಿಯೊಬ್ಬ ಮನುಷ್ಯನ ಬದುಕು ಭೂಮಿಯೊಂದಿಗೆ ಹಾಸು ಹೊಕ್ಕಾಗಿದೆ. ಭೂಮಿಯಿಲ್ಲದೆ ಬದುಕು ನಿರರ್ಥಕ ಎಂದು ಅರಿತುಕೊಳ್ಳಬೇಕು ಎಂದರು.
ಪ್ರಕೃತಿಯಲ್ಲಿ ಏಕಾಂಗಿ ಎಂಬುದೇ ಇಲ್ಲ. ಪ್ರತಿಯೊಂದು ಜೀವಿಗೂ ಜೀವಿಸುವ ಸಮಾನ ಹಕ್ಕಿದೆ. ಜೀವಿಗಳಿಗಿರುವ ಏಕೈಕ ಗ್ರಹವಾದ ಭೂಮಿಯೇ ನಮ್ಮ ಮನೆ ಎಂದರು.
ವಿಶ್ವ ಭೂಮಿ ದಿನಾಚರಣೆಯ ಸಂದೇಶದ ಪ್ರತಿಜ್ಞಾ ವಿಧಿಯನ್ನು ಟಿ.ಜಿ.ಪ್ರೇಮಕುಮಾರ್ ಅವರು ಭೋದಿಸಿದರು. ಇದೇ ಸಂದರ್ಭದಲ್ಲಿ ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಹೊರತಂದಿರುವ ಕರಪತ್ರ ಬಿಡುಗಡೆ ಮಾಡಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಿಣ್ಣಪ್ಪ, ನೆಹರು, ದಯಾನಂದ, ಸೀಮಾ, ವಲಯ ಅರಣ್ಯಾಧಿಕಾರಿ ಜಗದೀಶ್ ಇತರರು ಹಾಜರಿದ್ದರು.
ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎ.ಜಯಪ್ಪ ನಿರೂಪಿಸಿದರು. ಶಿಕ್ಷಕರಾದ ಸಿ.ಎ.ಸುರೇಶ್ ಸ್ವಾಗತಿಸಿದರು. ಶಿಕ್ಷಕಿಯರಾದ ಮಾಲಾದೇವಿ ಮತ್ತು ಎಚ್.ಎಂ.ಭಾರತಿ ಅವರು ಪರಿಸರ ಗೀತೆ ಹಾಡಿದರು. ಎಂ.ಇ.ಮೊಹಿದ್ದೀನ್ ವಂದಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮಾಲಿನ್ಯ ತಡೆಯೋಣ ಪರಿಸರ ಸಂರಕ್ಷಿಸೋಣ, ಜಾಗತಿಕ ತಾಪಮಾನ ತಗ್ಗಿಸಿ ಭೂಮಿಯನ್ನು ಸಂರಕ್ಷಿಸಿ, ಉರಿಯವ ಭೂಮಿಯನ್ನು ತಂಪಾಗಿಸೋಣ ಬನ್ನಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಗಟ್ಟಿ, ಹಸಿರೇ ಉಸಿರು-ಜಲವೇ ಜೀವಜಲ, ಕುಡಿಯಿರಿ ಶುದ್ಧಜಲ ಉಳಿಸಿರಿ. ಅಂತರ್ಜಲ, ಜೀವ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮನೆಗೊಂದು ಮರ ಊರಿಗೊಂದು ವನ, ಸ್ವಚ್ಛ ಗ್ರಾಮ ಆರೋಗ್ಯಧಾಮ, ಜೈವಿಕ ಇಂಧನ ಭವಿಷ್ಯದ ಇಂಧನ, ಬೈಸಿಕಲ್ ಬಳಸಿ ಇಂಧನ ಉಳಿಸಿ, ಬೈಸಿಕಲ್ ಬಳಸಿ ಪರಿಸರ ಸಂರಕ್ಷಿಸಿ ಎಂಬ ಘೋಷ ವಾಕ್ಯಗಳು ಮೊಳಗಿದವು. ಸಭಾ ಕಾರ್ಯಕ್ರಮದ ಮೊದಲು ಅರಣ್ಯ ಭವನದ ಆವರಣದಲ್ಲಿ ಗಿಡ ನೆಡಲಾಯಿತು.