ವೈದ್ಯರ ಯಡವಟ್ಟು; ಸತ್ತಿದ್ದಾನೆಂದು ಹೇಳಿದ ವ್ಯಕ್ತಿ ಶವಾಗಾರದಲ್ಲಿ ಎದ್ದು ಕೂತಿದ್ದ!

No comments

ಸಾಗರ (ಮಧ್ಯಪ್ರದೇಶ): ವೈದ್ಯರನ್ನು ದೇವರೆಂದು ಭಾವಿಸುವವರಿದ್ದಾರೆ. ಆದರೆ, ಕೆಲವೊಮ್ಮೆ ವೈದ್ಯರು ಮಾಡುವ ಯಡವಟ್ಟುಗಳು ಅಂತಿಂಥದ್ದಲ್ಲ. ಮಧ್ಯಪ್ರದೇಶದಲ್ಲಿ ವೈದ್ಯರು ಸತ್ತಿದ್ದಾನೆಂದು ಘೋಷಿಸಿದ್ದ 72 ವರ್ಷದ ವ್ಯಕ್ತಿಯೋರ್ವರು ಶವಾಗಾರದಲ್ಲಿ ಎದ್ದು ಕುಳಿತ ಘಟನೆ ನಡೆದಿದೆ.
ಚತರ್ಪುರ ಜಿಲ್ಲೆಯ ನೌಗಾಂವ್​ ನಿವಾಸಿ ಕಿಷನ್ ಅವರನ್ನು ಬಿನಾ ನಗರದ ಸರ್ಕಾರಿ  ಆಸ್ಪತ್ರೆಗೆ ಸೇರಿಸಿದಾಗ ಸತ್ತುಹೋಗಿರುವುದಾಗಿ ವೈದ್ಯರು ಘೋಷಿಸಿದ್ದರು. ಆದರೆ, ಮಾರನೇ ದಿನ ಶವಾಗಾರದಿಂದ ಕಿಷನ್​ ಅವರ ದೇಹವನ್ನು ತೆಗೆಯುವ ವೇಳೆ ಅವರು ಉಸಿರಾಡುತ್ತಿದ್ದುದು ಗಮನಕ್ಕೆ ಬಂದಿತು.
72 ವರ್ಷದವರಾಗಿದ್ದ ಕಿಷನ್​ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ರಸ್ತೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಪತ್ರವನ್ನೂ ಕಳುಹಿಸಿದ್ದರು. ಅಸಲಿಗೆ ಆ ವ್ಯಕ್ತಿ ಸತ್ತೇ ಇರಲಿಲ್ಲ. ಮಾರನೇ ಬೆಳಗ್ಗೆ ಪೊಲೀಸರು ತಪಾಸಣೆಗೆಂದು ಶವಾಗಾರಕ್ಕೆ ಬಂದಾಗ ಆ ವ್ಯಕ್ತಿ  ಉಸಿರಾಡುತ್ತಿದ್ದರು. ಬಳಿಕ, ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಆ ದಿನ ಸಂಜೆ ಸಾವನ್ನಪ್ಪಿದ್ದರು.

No comments

Post a Comment