ಬೆಂಗಳೂರು(ಜೂನ್.23): ಐಎಂಎ ವಂಚನೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮನ್ಸೂರ್ ಖಾನ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ವಂಚಕ ಮನ್ಸೂರ್ ಖಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಐಡಿ ಇಂಟರ್ ಪೋಲ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸಿಐಡಿ ಅಧಿಕಾರಿಗಳ ಪ್ರಸ್ತಾವಣೆಗೆ ಸ್ಪಂದಿಸಿದ ಇಂಟರ್ ಪೋಲ್, ಆರೋಪಿ ಪತ್ತೆ ಹಚ್ಚುವ ಉದ್ದೇಶದಿಂದ ಈ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಮನ್ಸೂರ್ 32 ಸಾವಿರಕ್ಕೂ ಹೆಚ್ಚು ಜನರಿಗೆ 500 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಇವರ ಮಾಲೀಕತ್ವದ ಐಎಂಎ ಜ್ಯುವೆಲ್ಸ್ ಲಾಕರ್ಗಳು ಕೂಡ ಖಾಲಿಯಾಗಿವೆ. ಇದರಿಂದಾಗಿ ಪ್ರಕರಣದ ಬೆನ್ನತ್ತಿರುವ ಎಸ್ಐಟಿ ಹಾಗೂ ಇಡಿ ಅಧಿಕಾರಿಗಳಲ್ಲಿ ತೀವ್ರ ನಿರಾಸೆಯೂ ಮೂಡಿದೆ.
ಬಹುಕೋಟಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಹಣ ಕಳೆದುಕೊಂಡವರಿಗೆ ನ್ಯಾಯ ಕಲ್ಪಿಸುವ ಭರವಸೆ ನೀಡಿದೆ. ಅಲ್ಲದೇ ಪ್ರಕರಣದ ತನಿಖೆಯನ್ನು ಎಸ್ಐಟಿ ವಶಕ್ಕೆ ನೀಡಿದೆ. ಇದೇ ವೇಳೆ ಐಎಂಎ ಕಂಪನಿಯ ಬ್ಯಾಂಕ್ ಖಾತೆಗಳಲ್ಲಿ ವಿದೇಶಿ ವಿನಿಮಯ ಕೂಡ ನಡೆದಿದೆ ಎಂಬ ಅಂಶ ಪತ್ತೆ ಹಚ್ಚಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಹ ಈ ಪ್ರಕರಣದ ಬೆನ್ನತ್ತಿದ್ದಾರೆ.

No comments
Post a Comment