2 ಅಡಿ ಜಾಗಕ್ಕಾಗಿ ನಡೆದೇ ಹೋಯ್ತು ಮಾರಣಹೋಮ; ಸಂಬಂಧಿಕರಿಂದ ಒಂದೇ ಕುಟುಂಬದ ಐವರ ಕೊಲೆ

No comments

ಮಧ್ಯಪ್ರದೇಶ,(ಜೂ.22): ಜಮೀನು ಅಥವಾ ಭೂಮಿಗಾಗಿ ಅಪ್ಪ-ಮಕ್ಕಳ ನಡುವೆ, ಅಣ್ಣ-ತಮ್ಮಂದಿರ ನಡುವೆ ಜಗಳ-ಕೊಲೆಗಳು ನಡೆಯುತ್ತವೆ. ಇಲ್ಲೂ ಸಹ 2 ಅಡಿ ಭೂಮಿ ವಿಚಾರವಾಗಿ ನಡೆದ ಜಗಳದಲ್ಲಿ ಒಂದು ಕುಟುಂಬವೇ ನಾಶವಾಗಿದೆ. ಸಂಬಂಧಿಕರೇ ಕುಟುಂಬದ ಐದು ಜನರನ್ನೂ ಗುಂಡು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಮನೋಜ್​ ಅಹಿರ್ವಾರ್(45)​, ಸಂಜೀವ್​​​ ಅಹಿರ್ವಾರ್(35), ತಾರಾಬಾಯಿ(55), ರಾಜಕುಮಾರಿ(30), ಯಶವಂತ್​(12) ಸಾವನ್ನಪ್ಪಿದವರು. ಮನೋಜ್​ ಅಹಿರ್ವಾರ್​ ಮತ್ತು ಸಂಜೀವ್​ ಅಹಿರ್ವಾರ್​ ಇಬ್ಬರೂ ಅಣ್ಣ-ತಮ್ಮಂದಿರು. ಇವರು ಭೋಪಾಲ್​ನಿಂದ 150 ಕಿ.ಮೀ ದೂರದಲ್ಲಿರುವ ಬಿನಾ ನಗರದಲ್ಲಿ ವಾಸವಿದ್ದರು.
ಎರಡು ದಿನಗಳ ಹಿಂದೆ ಈ ಸಹೋದರರ ಚಿಕ್ಕಪ್ಪ ಮನೋಹರ್​ ಅಹಿರ್ವಾರ್​ ಸಂಜೀವ್​ ​ಮನೆಗೆ ಬಂದಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿಮ್ಮ ಕುಟುಂಬಕ್ಕೆ ಸೇರಿದ 2 ಅಡಿ ಜಾಗ ಕೊಡಿ ಎಂದು ಮನೋಹರ್​ ಕೇಳಿದ್ದಾರೆ. ಆದರೆ ಸಹೋದರರಾದ ಮನೋಜ್​ ಹಾಗೂ ಸಂಜೀವ್ ಜಾಗ ಬಿಟ್ಟುಕೊಡಲು ಒಪ್ಪಲಿಲ್ಲ. ಬಳಿಕ ಇಬ್ಬರ ನಡುವೆ ವಾದ-ವಿವಾದಗಳು ನಡೆದು ಪರಿಸ್ಥಿತಿ ತಾರಕಕ್ಕೇರಿದೆ.
ಈ ವೇಳೆ ಮನೋಹರ್​ ಅಹಿರ್ವಾರ್​ ಮಕ್ಕಳಾದ ಪ್ರವೀಣ್​ ಮತ್ತು ಪ್ರಶಾಂತ್​ ಮನೆಗೆ ಬಂದು ಸಂಜೀವ್​ ಕುಟುಂಬಸ್ಥರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬ ಬಾಲಕ ಸೇರಿದಂತೆ ಐವರೂ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ವೇಳೆ ಮತ್ತೊಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ರೂಮ್​ ಒಂದರಲ್ಲಿ ಇದ್ದರು. ಇದರಿಂದಾಗಿ ಆ ಮೂವರ ಜೀವ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿ ಮನೋಹರ್​ ಅಹಿರ್ವಾರ್​ನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಪಿಸ್ತೂಲ್​ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಇಬ್ಬರು ಮಕ್ಕಳು ಪರಾರಿಯಾಗಿದ್ದಾರೆ. ಮೂವರ ವಿರುದ್ಧವೂ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಪೊಲೀಸರು ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

No comments

Post a Comment