ಬಿಜೆಪಿ ಸೇರಲಾರೆ , ಜೆಡಿಎಸ್ ಬಿಡಲಾರೆ, ಡಾ:ಯಾಲದಾಳು ಮನೋಜ್ ಬೋಪಯ್ಯ ಸ್ಪಷ್ಟನೆ

No comments

ಬಿಜೆಪಿ ಸೇರಲಾರೆ, ಜೆಡಿಎಸ್ ಬಿಡಲಾರೆ : ಡಾ.ಯಾಲದಾಳು ಮನೋಜ್ ಬೋಪಯ್ಯ ಸ್ಪಷ್ಟನೆ
ಮಡಿಕೇರಿ ಏ.14 :
ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಡಾ.ಯಾಲದಾಳು ಮನೋಜ್ ಬೋಪಯ್ಯ ಅವರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಳ್ಳುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಜಾತ್ಯತೀತ ನಿಲುವಿನ ರಾಜಕಾರಣಿಯಾದ ನಾನು ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತು ನನ್ನ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಹಾಗೂ ಜೆಡಿಎಸ್ ಮುಖಂಡರು ನನಗೆ ನೀಡಿರುವ ಭರವಸೆಯ ಕಾರಣದಿಂದ ಬಿಜೆಪಿಗೆ ಸೇರದೆ ಜೆಡಿಎಸ್‍ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಮಾಜ ಸೇವೆಗಾಗಿ ಜಾತ್ಯತೀತ ನಿಲುವಿನಡಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ನನ್ನ ಬಗ್ಗೆ ಅನೇಕರು ಅಪಾರ ಅಭಿಮಾನವನ್ನು ಹೊಂದಿದ್ದರು. ಬಿಜೆಪಿಗೆ ಸೇರುವ ನಿರ್ಧಾರವನ್ನು ಘೋಷಿಸಿದ ನಂತರ ಎಲ್ಲರೂ ಬೇಸರ ಪಟ್ಟುಕೊಂಡರಲ್ಲದೆ ಇದರ ಬದಲು ರಾಜಕೀಯ ಸನ್ಯಾಸ ಸ್ವೀಕರಿಸುವಂತೆ ಸಲಹೆ ನೀಡಿದ್ದರು. ನನ್ನನ್ನು ಬೆಂಬಲಿಸುತ್ತಿರುವ ಹಿರಿಯರು ಹಾಗೂ ಕಿರಿಯರ ಮನಸ್ಸಿಗೆ ನೋವುಂಟು ಮಾಡಬಾರದು ಮತ್ತು ಬಿಜೆಪಿಯ ಸಿದ್ಧಾಂತಗಳು ಜಾತ್ಯತೀತ ನಿಲುವಿನವನಾದ ನನಗೆ ಒಗ್ಗಿ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಜೆಡಿಎಸ್ ನಲ್ಲೇ ಉಳಿದುಕೊಳ್ಳುವುದಾಗಿ ತಿಳಿಸಿದ್ದಾರೆ.
ಪಕ್ಷದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಚುನಾವಣೆ ನಂತರ ಸರಿ ಪಡಿಸುವುದಾಗಿ ಜೆಡಿಎಸ್ ನಾಯಕರಾದ ಬಿ.ಎ.ಜೀವಿಜಯ ಸೇರಿದಂತೆ ಇತರ ನಾಯಕರು ಭರವಸೆ ನೀಡಿದ್ದಾರೆ. ಒಂದು ವೇಳೆ ಪಕ್ಷದಲ್ಲಿ ನನಗೆ ನ್ಯಾಯ ಸಿಗದಿದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆಯೇ ಹೊರತು ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್‍ನಲ್ಲಿ ನೋವುಂಟಾದಾಗ ಸಾಂತ್ವನ ಹೇಳಿ ಬಿಜೆಪಿಗೆ ಸ್ವಾಗತಿಸಲು ಸಿದ್ಧರಾಗಿದ್ದ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅಲ್ಲದೆ ಜೆಡಿಎಸ್ ಬಿಡದಂತೆ ನನ್ನ ಮನವೊಲಿಸಿದ ನಾಯಕರಾದ ಬಿ.ಎ.ಜೀವಿಜಯ ಹಾಗೂ ರಾಜಾರಾವ್ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಮನೋಜ್ ಬೋಪಯ್ಯ ತಿಳಿಸಿದ್ದಾರೆ.
ಏ.15 ರಂದು ಕುಶಾಲನಗರದಲ್ಲಿ ನಡೆಯುವ ಜೆಡಿಎಸ್- ಕಾಂಗ್ರೆಸ್ ಮೈತ್ರಿಯ ಬೃಹತ್ ಪ್ರಚಾರ ಸಭೆಯಲ್ಲಿ ತಾನು ಪಾಲ್ಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

No comments

Post a Comment