ಜೈ ಶ್ರೀ ರಾಮ್ ಹೇಳುವಂತೆ ಒತ್ತಾಯಿಸಿ ಮುಸ್ಲಿಂ ಯುವಕನನ್ನು ಥಳಿಸಿ ಕೊಂದ ಗುಂಪು

No comments

ಜಮ್​ಶೆಡ್​ಪುರ (ಜೂ. 24): ಕಳ್ಳತನ ಮಾಡಿದ್ದಾನೆಂಬ ಅನುಮಾನದಿಂದ ಮುಸ್ಲಿಂ ಯುವಕನೊಬ್ಬನ ಮೇಲೆ ಜನರ ಗುಂಪು ದಾಳಿ ನಡೆಸಿ ಮನಬಂದಂತೆ ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.
ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜೂನ್ 18ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಈ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ಜನರಿಂದ ಥಳಿಸಿಕೊಂಡ ಯುವಕನನ್ನು 24 ವರ್ಷದ ತಬ್ರೇಜ್ ಹನ್ಸಾರಿ ಎಂದು ಗುರುತಿಸಲಾಗಿದೆ. ಹೊಡೆಯುತ್ತಿರುವ ಜನರು ಆತನಿಗೆ ಜೈ ಶ್ರೀರಾಮ್​ ಎಂದು ಹೇಳುವಂತೆ ಒತ್ತಾಯಿಸುವುದು ವಿಡಿಯೋದಲ್ಲಿ ದಾಖಲಾಗಿದೆ.
ಸುಮಾರು 18 ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿ ಆತನನ್ನು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜೂನ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಊರಿನವರ ಮೋಟಾರ್​ ಬೈಕ್​ ಕದ್ದಿದ್ದಾನೆ ಎಂದು ಆರೋಪಿಸಿ ಈ ಯುವಕನಿಗೆ ಮಾರಣಾಂತಿಕವಾಗಿ ಥಳಿಸಲಾಗಿದೆ. ಹೊಡೆತದಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಯುವಕನಿಗೆ ಜೈ ಶ್ರೀರಾಮ್, ಜೈ ಹನುಮಾನ್​​ ಎಂದು ಹೇಳುವಂತೆ ಜನರು ಒತ್ತಾಯಿಸಿದ್ದಾರೆ.

ಹೊಡೆದ ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆತನ ಸಂಬಂಧಿಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಿರುವ ಬಗ್ಗೆ ಪೊಲೀಸರು ನಮಗೆ ಯಾವ ಮಾಹಿತಿಯನ್ನೂ ನೀಡಿರಲಿಲ್ಲ. ಜೈಲಿನಲ್ಲಿದ್ದ ಮಗನನ್ನು ನೋಡಲು ಅವಕಾಶವನ್ನೂ ನೀಡಲಿಲ್ಲ. ಆತನಿಗೆ ಹಿಂಸೆ ಕೊಟ್ಟ ಜನರು ಮತ್ತು ಪೊಲೀಸರೆಲ್ಲ ಜೈಲಿಗೆ ಹೋಗಬೇಕು ಎಂದು ಹನ್ಸಾರಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಬುಲಂದ್​ಶೆಹರ್​ನಲ್ಲಿ ಗೋವುಗಳ ಹತ್ಯೆ ಆರೋಪದಲ್ಲಿ ಇದೇ ರೀತಿ ಗಲಾಟೆಯೆದ್ದು ಪೊಲೀಸ್​ ಅಧಿಕಾರಿ ಸುಭೋದ್​ ಸಿಂಗ್ ಮತ್ತು ಯುವಕ ಸುಮಿತ್ ಕುಮಾರ್​ಗೆ ಥಳಿಸಿ ಹತ್ಯೆ ಮಾಡಲಾಗಿತ್ತು. ಇಂತಹ ಘಟನೆಗಳು ಪುನರಾವರ್ತಿತವಾಗುತ್ತಿದ್ದು, ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಟ್ವಿಟ್ಟರ್​ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

No comments

Post a Comment